ಕೊಪ್ಪ: ‘ದ್ವೇಷ ಇದ್ದಲ್ಲಿ ಆಯಸ್ಸು ಕಡಿಮೆ, ಪ್ರೀತಿ ಇದ್ದಲ್ಲಿ ಆಯಸ್ಸು ಹೆಚ್ಚು. ಏಸುವಿನ ಸಂದೇಶ ಪಾಲಿಸಿದರೆ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ’ ಎಂದು ಚಿಕ್ಕಮಗಳೂರು ಧರ್ಮಪ್ರಾಂತ್ಯದ ಬಿಷಪ್ ಟಿ.ಅಂತೋನಿ ಸ್ವಾಮಿ ಹೇಳಿದರು.
ಬುಧವಾರ ನಡೆದ ನಿತ್ಯಾಧಾರ ಮಾತೆ ದೇವಾಲಯದ ಅಮೃತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ‘ಯಾವುದೇ ಧರ್ಮದವರಿರಲಿ ಎಲ್ಲರೂ ದೇವರ ಮಕ್ಕಳು’ ಎಂದು ತಿಳಿಸಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಅಂಬೇಡ್ಕರ್ ಅವರು ಎಲ್ಲಾ ಧರ್ಮದ ಜನರು ಒಗ್ಗೂಡಿ ಬದುಕಲು ಸಂವಿಧಾನದ ಮೂಲಕ ಅವಕಾಶ ಕಲ್ಪಿಸಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ, ಉದ್ಯಮ ಕ್ಷೇತ್ರಕ್ಕೆ ಕ್ರೈಸ್ತ ಸಮುದಾಯ ಕೊಡುಗೆ ನೀಡಿದೆ’ ಎಂದು ಶ್ಲಾಘಿಸಿದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮಾತನಾಡಿ, ‘ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು. ಕ್ರಿಶ್ಚಿಯನ್ನರು ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಯಾವುದೇ ವ್ಯಕ್ತಿಯಾಗಿದ್ದರೂ ಆತನ ವ್ಯಕ್ತಿತ್ವಕ್ಕೆ ಗೌರವ ಸಿಗಬೇಕು’ ಎಂದು ಹೇಳಿದರು.
ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿ, ‘ಕ್ರೈಸ್ತ ಮಿಷನರಿಗಳು ಕೇವಲ ಚರ್ಚ್ ನಿರ್ಮಿಸದೆ ಅದರ ಪಕ್ಕದಲ್ಲಿ ಶಾಲೆಗಳನ್ನು ತೆರೆದು, ಸಮಾಜದ ಅಭಿವೃದ್ಧಿ ಬಗ್ಗೆಯೂ ಚಿಂತನೆ ಮಾಡುತ್ತದೆ. ಪ್ರಾರ್ಥನೆ, ಸೇವೆ, ಜನರ ಅವಶ್ಯಕತೆಯನ್ನು ಪೂರೈಸುವುದು ಇವುಗಳು ಏಸು ಕ್ರಿಸ್ತನ ಸಂದೇಶ’ ಎಂದರು.
ವಿವಿಧ ಕ್ಷೇತ್ರದ ಸಾಧಕರನ್ನು, ಗಣ್ಯರನ್ನು, ನಿತ್ಯಾಧಾರ ಮಾತೆ ಚರ್ಚ್ನ ಹಿಂದಿನ ಗುರುಗಳನ್ನು ಸನ್ಮಾನಿಸಲಾಯಿತು.
ಧರ್ಮಪ್ರಾಂತ್ಯದ ಧರ್ಮಾಧಿಕಾರಿ ಎಲಿಯಾಸ್ ಸೀಕ್ವೆರಾ, ಬಾಳೆಹೊನ್ನೂರು ಧರ್ಮಕೇಂದ್ರದ ಮುಖ್ಯಸ್ಥ ಪೌಲ್ ಡಿಸೋಜ, ಪ್ರಾಂತ್ಯಾಧಿಕಾರಿಣಿ ಲಿಲ್ಲಿ ಫರ್ನಾಂಡಿಸ್, ಜೆರೊಮ್ ಮೆಕ್ಯಾಡೊ, ಸಿ.ಅಂತೋನಿ ರಾಜ್, ಸ್ಟ್ಯಾನಿ ಜೆ. ಲೋಬೊ, ಜೋಸೆಫ್ ವಿಜಯ್ ಮಾಡ್ತಾ, ತಹಶೀಲ್ದಾರ್ ವಿಮಲ ಸುಪ್ರಿಯಾ, ಕೊಪ್ಪ ನಿತ್ಯಾಧಾರ ಮಾತೆ ದೇವಾಲಯದ ಧರ್ಮಗುರು ಮೆಲ್ವಿನ್ ಟೆಲ್ಲಿಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.