ಚಳ್ಳಕೆರೆ: ಮಕ್ಕಳಿಗೆ ಸಾಮಾಜಿಕ– ನೈತಿಕ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸಮಾಜದ ಆಸ್ತಿಯನ್ನಾಗಿ ಮಾಡಬೇಕು ಎಂದು ವೀರಶೈವ ಸಮಾಜ ಸೇವಾ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸಿ.ನಾಗರಾಜ ಪೋಷಕರಲ್ಲಿ ಮನವಿ ಮಾಡಿದರು.
ತಾಲ್ಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ, ವೀರಶೈವ ಸೇವಾ ಸಮಾಜ ಸಂಘ ಹಾಗೂ ವೀರಶೈವ ಸಂಘಗಳ ತಾಲ್ಲೂಕು ಒಕ್ಕೂಟಗಳ ಸಹಯೋಗದಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳನ್ನು ಟಿ.ವಿ, ಸಿನಿಮಾ, ಮೊಬೈಲ್, ವ್ಯಾಟ್ಸ್ಆ್ಯಪ್ ಮುಂತಾದವುಗಳ ವ್ಯಸನಿಗಳಾಗಲು ಬಿಡಬಾರದು. ಮಕ್ಕಳ ಚಲನ– ವಲನ ಮತ್ತು ಕಲಿಕೆ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಮೈಸೂರು ಬ್ಯಾಂಕ್ ನೋಟ್ ಪೇಪರ್ ಮಿಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ತಾಳ್ಕೇರಪ್ಪ, ‘ಸಮಾಜದ ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುವುದಲ್ಲದೇ ಅವರ ಪ್ರತಿಭೆ ಗುರುತಿಸಿ ಗೌರವಿಸಬೇಕು’ ಎಂದು ಹೇಳಿದರು.
ಹೂವಿನಡಗಲಿ ಗವಿಸಿದ್ಧೇಶ್ವರ ಶಾಖಾ ಮಠದ ಹಿರಿಶಾಂತವೀರ ಸ್ವಾಮೀಜಿ, ‘ಹನ್ನೆರಡನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಮಕ್ಕಳಿಗೆ ತಪ್ಪದೆ ಮನನ ಮಾಡಿಸಬೇಕು’ ಎಂದು ಹೇಳಿದರು.
ಚಿತ್ರದುರ್ಗ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ವೀರಶೈವ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಎನ್.ಸತೀಶ್,
ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಗುರುಸಿದ್ಧಮೂರ್ತಿ, ಪ್ರಾಧ್ಯಾಪಕ ಪ್ರೊ.ಜಿ.ವಿ.ರಾಜಣ್ಣ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಟಿ.ಎ.ಟಿ.ಪ್ರಭುದೇವ್, ಪರಶುರಾಂಪುರ ಹೋಬಳಿ ಘಟಕದ ಮಾಜಿ ಅಧ್ಯಕ್ಷ ಕಿರಣ್ಶಂಕರ್, ಬಿಜೆಪಿ ಮುಖಂಡ ಬಿ.ಎಸ್.ಶಿವಪುತ್ರಪ್ಪ, ನಗರಸಭೆ ಸದಸ್ಯೆ ಸಾವಿತ್ರಮ್ಮ, ಸದಸ್ಯ ಕೆ.ಎಂ.ನಟರಾಜ, ಕಿರಣ್, ಛೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ವಂದನಾ ಬಸವರಾಜ, ವೀರಶೈವ ಸಮಾಜದ ಮುಖಂಡ ಪಿ.ಜಗದೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.