ADVERTISEMENT

ಪೂರ್ವಗ್ರಹಪೀಡಿತ ವರದಿ, ಸಮೀಕ್ಷೆ ನಾಟಕ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 12:16 IST
Last Updated 17 ಸೆಪ್ಟೆಂಬರ್ 2020, 12:16 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ಜಸ್ಟೀಸ್‌ ನಾಗಮೋಹನ ದಾಸ್‌ ಅಲ್ಲ, ಅವರು ಇನ್‌ಜಸ್ಟೀಸ್‌ ನಾಗಮೋಹನ ದಾಸ್‌. ಅವರು ಪೂರ್ವಗ್ರಹಪೀಡಿತರಾಗಿ ವರದಿ ತಯಾರಿ ಮಾಡಿಕೊಂಡು ಸಮೀಕ್ಷೆಗೆ ಹೋದವರು, ಸತ್ಯಶೋಧನೆಗೆ ಹೋದವರಲ್ಲ’ ಎಂದು ಸಚಿವ ಸಿ.ಟಿ. ರವಿ ಕಟಕಿಯಾಡಿದರು.

ಡಿ.ಜೆ.ಹಳ್ಳಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ‘ನಾವು ಭಾರತೀಯರು ಸಂಘಟನೆ’ ಸಿದ್ಧಪಡಿಸಿದ ಸತ್ಯಶೋಧನಾ ವರದಿಯನ್ನು ನ್ಯಾ.ನಾಗಮೋಹನ ದಾಸ್‌ ಬಿಡುಗಡೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅದು ಸತ್ಯಶೋಧನಾ ಸಮಿತಿಯಲ್ಲ. ಸುಳ್ಳನ್ನು ಸತ್ಯವೆಂದು ಬಿಂಬಿಸಲು ಹೊರಟ ಷಡ್ಯಂತ್ರದ ಸಮಿತಿ’ ಎಂದು ಟೀಕಿಸಿದರು.

‘ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಬಂದಾಕ್ಷಣ ಊರಿಗೆ ಬೆಂಕಿ ಹಾಕುವುದನ್ನು ನಾಗಮೋಹನ ದಾಸ್‌ ಸಮಿತಿ ಒಪ್ಪಿಕೊಳ್ಳುತ್ತಾ? ನವೀನ್‌ ಪೋಸ್ಟ್‌ ಹಾಕಿದ ಅಂಥ ಹೇಳುತ್ತೀರಿ, ನವೀನ್‌ಗೆ ಬಂದಿದ್ದ ಪೋಸ್ಟ್‌ನಲ್ಲಿ ರಾಮ, ಕೃಷ್ಣನ ಬಗ್ಗೆ ಹಾಕಿದ್ದ ಕಾಮೆಂಟ್‌ಗಳ ಬಗ್ಗೆ ಸತ್ಯಶೋಧನಾ ಸಮಿತಿ ಯಾಕೆ ಕಣ್ಣುಮುಚ್ಚಿ ಕುಳಿತಿದೆ? ಅಂದರೆ, ಉಳಿದವರು ಹಿಂದೂ ಧರ್ಮವನ್ನು ಅಪಮಾನಿಸಿದರೆ ನಾಗಮೋಹನ ದಾಸ್‌ ಅಂಥವರಿಗೆ ಏನೂ ಅನ್ನಿಸುವುದಿಲ್ಲ. ಕಮ್ಯುನಿಸ್ಟ್‌ ಅಜೆಂಡಾ, ಒಡಕಿನ ಬೀಜ ಬಿತ್ತಲು ಕೆಲವರನ್ನು ಈ ರೀತಿ ಮುಂಚೂಣಿಯಲ್ಲಿ ಇಟ್ಟುಕೊಂಡಿರುತ್ತಾರೆ. ಆ ಪೈಕಿ ಇವರೂ ಒಬ್ಬರು’ ಎಂದು ಕುಟುಕಿದರು.

ADVERTISEMENT

‘ನಾಗಮೋಹನ ದಾಸ್‌ ಅವರು ದತ್ತಪೀಠ ವಿಚಾರದಲ್ಲೂ ದ್ರೋಹ ಬಗೆದರು. ದತ್ತಪೀಠಕ್ಕೆ ಸಂಬಂಧಿಸಿದಂತೆ ನಮ್ಮವರು ನೀಡಿದ ದಾಖಲೆಗಳನ್ನು ಅವರು ಏನು ಮಾಡಿದರು? ಬಾಬಾಬುಡನ್‌ ದರ್ಗಾ ಹಾಗೂ ದತ್ತಾತ್ರೇಯ ಪೀಠ ಬೇರೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ. ನ್ಯಾಯಮೂರ್ತಿ ಪದಕ್ಕೆ ಕಳಂಕ ಬರುವ ರೀತಿಯಲ್ಲಿ ವರದಿ ಕೊಟ್ಟರು’ ಎಂದು ಚುಚ್ಚಿದರು.

‘ಹಿಂದಿ ದಿವಸಕ್ಕೆ ವಿರೋಧ; ನಾಟಕವಲ್ಲವೇ?’
‘ಉರ್ದು ದಿವಸ ಆಚರಣೆಗೆ ಸ್ವತಃ ಸಿದ್ದರಾಮಯ್ಯ ಹೋಗಿ ಬರುತ್ತಾರೆ. ಆದರೆ, ಹಿಂದಿ ದಿವಸಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಇದು ನಾಟಕವಲ್ಲವೇ?’ ಎಂದು ಸಚಿವ ರವಿ ಪ್ರಶ್ನಿಸಿದರು.

‘ಪರ್ಷಿಯನ್‌ ಭಾಷೆಯನ್ನು ಆಡಳಿತ ಭಾಷೆಯಾಗಿ ಹೇರಿ ಕನ್ನಡದ ಕಗ್ಗೊಲೆ ಮಾಡಿದ ಟಿಪ್ಪು ಜಯಂತಿಯನ್ನು ವೈಭವೀಕರಿಸಿ ಆಚರಿಸುವಂಥ ಕಾಂಗ್ರೆಸ್‌ಗೆ ಕನ್ನಡದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ಅವತ್ತು ಒಪ್ಪಿಕೊಂಡಿದ್ದ ಕಾಂಗ್ರೆಸ್‌ ಇವತ್ತು ಬಣ್ಣ ಬದಲಿಸುತ್ತಿರುವುದು ಗೋಸುಂಬೆತನ’ ಎಂದು ಕಿಡಿಕಾರಿದರು.

‘ಹೋರಾಟ, ಕನ್ನಡದ ಉಳಿವಿಗೋ? ಹಿಂದಿ ದ್ವೇಷಕ್ಕೋ? ಎಂಬುದನ್ನು ಹೋರಾಟಗಾರರು ಸ್ಪಷ್ಟಪಡಿಸಬೇಕು. ಹಿಂದಿ ವಿರೋಧಿಸುವವರು ಅಂಬೇಡ್ಕರ್‌ ಅವರನ್ನು ವಿರೋಧಿಸುತ್ತಾರೆ. ಸಂವಿಧಾನವನ್ನೂ ವಿರೋಧಿಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.