ADVERTISEMENT

ಸಿ.ಎಂ ಬದಲಾವಣೆ ಚರ್ಚೆ; ಅಭಿವೃದ್ಧಿಗೆ ಒಳ್ಳೆಯದಲ್ಲ:  ಸಚಿವ ಜೆ.ಸಿ. ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 14:23 IST
Last Updated 11 ಆಗಸ್ಟ್ 2022, 14:23 IST
ಮಾಧುಸ್ವಾಮಿ
ಮಾಧುಸ್ವಾಮಿ   

ಲಕ್ಯಾ (ಚಿಕ್ಕಮಗಳೂರು): ‘ಆಡಳಿತ ನಡೆಸಿ ಅನುಭವ ಇರುವವರು (ಕಾಂಗ್ರೆಸ್‌ನವರು) ಸಿ.ಎಂ ಬದಲಾಗುತ್ತಾರೆ ಎಂದು ಪದೇಪದೇ ಹೇಳಬಾರದು. ಹಾಗೆ ಹೇಳಿ ಆಡಳಿತಶಾಹಿಗಳಿಗೆ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣ ಮಾಡಿದರೆ ರಾಜ್ಯದ ಅಭಿವೃದ್ಧಿಗೆ ಒಳ್ಳೆಯದಲ್ಲ’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾರಾ, ಡಿ.ಕೆ. ಶಿವಕುಮಾರ್‌ ಆಗ್ತಾರಾ? ಎಂದು ನಾವು ಎಂದೂ ಮಾತನಾಡಿಲ್ಲ. ಒಂದು ಪಕ್ಷದ ನಾಯಕತ್ವದ ವಿಚಾರವನ್ನು ಮತ್ತೊಂದು ಪಕ್ಷದವರು ಸತತವಾಗಿ ಚರ್ಚೆ ಮಾಡುವುದು ರಾಜಕೀಯದಲ್ಲಿ ಗೌರವ ತರಲ್ಲ’ ಎಂದರು.

‘ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ‘ಅಫಿಡವಿಟ್‌’ ಸಲ್ಲಿಸಲಾಗಿದೆ. ವ್ಯವಸ್ಥಾಪನಾ ಮಂಡಳಿ ಏನೇನು ಮಾಡಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ. 2010ರಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯಕ್ತರು ನೀಡಿದ್ದ ಆದೇಶ ಮತ್ತು ಈಗಿನ ಸ್ಥಿತಿ ಅವಲೋಕಿಸಿ ವರದಿ ನೀಡಲಾಗಿದೆ’ ಎಂದು ಉತ್ತರಿಸಿದರು.

ADVERTISEMENT

‘ಸಿ.ಎಂ ಬದಲಾವಣೆ ಕಪೋಲಕಲ್ಪಿತ’

‘ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂಬುದು ಕಪೋಲಕಲ್ಪಿತ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಮೂರು ತಿಂಗಳಿನಿಂದಲೂ ಇಂಥ ವರದಿಗಳು ಹರಿದಾಡುತ್ತಿವೆ. ಅವುಗಳಲ್ಲಿ ಹುರುಳಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ಬೆಂಗಳೂರಿನ ಈದ್ಗಾ ಮೈದಾನ ಸರ್ಕಾರದ ಆಸ್ತಿ ಎಂದು ಕೋರ್ಟ್‌ ಹೇಳಿದೆ. ಗಣೇಶೋತ್ಸವ ಆಚರಿಸಲು ಬಿಡಲ್ಲ ಎಂದು ಜಮೀರ್‌ ಹೇಳಿರುವುದು ಅವರ ಅಸಹಿಷ್ಣು ಭಾವ ತೋರಿಸುತ್ತದೆ. ಗಣೇಶೋತ್ಸವ ಆಚರಣೆ ಅನುಮತಿ ವಿಚಾರ ನಿರ್ಧರಿಸುವುದು ಜಿಲ್ಲಾಡಳಿತ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.