
ಮೂಡಿಗೆರೆ: ಮಲೆನಾಡು ಭಾಗದಲ್ಲಿ ಹೊರ ರಾಜ್ಯಗಳ ವಲಸೆ ಕಾರ್ಮಿಕರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕಾಗಿದ್ದು, ಅಕ್ರಮ ಬಾಂಗ್ಲಾ ವಲಸಿಗರು ಕಂಡು ಬಂದರೆ ಸಂಬಂಧಿಸಿದ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಒತ್ತಾಯಿಸಿದರು.
ಪಟ್ಟಣದ ಜೆಸಿಐ ಭವನದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮಕ್ಕೆ ಆಗ್ರಹಿಸಲು ವಿವಿಧ ಸಂಘಟನೆಗಳು ಇತ್ತೀಚೆಗೆ ಹಮ್ಮಿಕೊಂಡಿದ್ದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
‘ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಕಾಫಿ ತೋಟಗಳ ನಿರ್ವಹಣೆಗೆ ವಲಸೆ ಕಾರ್ಮಿಕರ ಅನಿವಾರ್ಯತೆಯಿದೆ. ಆದರೆ ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಹಳಷ್ಟು ಮಂದಿ ಬಾಂಗ್ಲಾದೇಶದ ನುಸುಳುಕೋರರು ಬಂದಿದ್ದಾರೆಂಬ ದೂರುಗಳಿವೆ. ಇಂತಹ ನುಸುಳುಕೋರರಿಂದ ಈಗಾಗಲೇ ಮಲೆನಾಡು ಭಾಗದಲ್ಲಿ ಬಹಳಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ. ಇದಕ್ಕೆ ತುರ್ತಾಗಿ ಕಡಿವಾಣ ಹಾಕಬೇಕು’ ಎಂದು ಹೇಳಿದರು.
ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಮಾತನಾಡಿ, 'ಕಾಫಿ ಎಸ್ಟೇಟ್ಗಳಲ್ಲಿ ಬರುವ ಕಾರ್ಮಿಕರ ಸಮಗ್ರ ಮಾಹಿತಿ ಹಾಗೂ ದಾಖಲೀಕರಣಕ್ಕಾಗಿ ಈ ಹಿಂದೆ ಚಿಕ್ಕಮಗಳೂರು ಜಿಲ್ಲಾ ಪೊರೆಯ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದರು. ಅದರಲ್ಲಿ ಕಾರ್ಮಿಕರ ವಿವರಗಳನ್ನು ಅಪ್ಲೋಡ್ ಮಾಡಲು ಅವಕಾಶವಿತ್ತು. ಆದರೆ ಅದೀಗ ನನೆಗುದಿಗೆ ಬಿದ್ದಿದೆ. ಜಿಲ್ಲೆಗೆ ನೂತನವಾಗಿ ಬಂದಿರುವ ಎಸ್ಪಿಯವರು ಇದರ ಬಗ್ಗೆ ಕ್ರಮ ವಹಿಸಿ ಆ್ಯಪ್ ಮೂಲಕ ವಲಸೆ ಕಾರ್ಮಿಕರ ಸುರಕ್ಷಿತ ನಿರ್ವಹಣೆಗೆ ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
ಟೈಲರ್ ಸಂಘದ ಗೌರವಾಧ್ಯಕ್ಷ ಶಿವೇಗೌಡ, ವಿಶ್ವಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸುದೇವ್ ಗುತ್ತಿ, ಮುಖಂಡರಾದ ಬಿ.ಎನ್.ಮನಮೋಹನ್, ಬಿ.ಸಿ.ದಯಾಕರ್, ಎಂ.ಆರ್.ಜಗದೀಶ್, ಮಂಜುನಾಥ್ ಬೆಟ್ಟಗೆರೆ, ಯು.ಬಿ.ನಾಗೇಶ್, ಬ್ರಿಜೇಶ್ ಕಡಿದಾಳು, ಪ್ರಸನ್ನ ಗೌಡಹಳ್ಳಿ, ಮಹೇಶ್ ಸಾಲುಮರ, ರಾಘವೇಂದ್ರ ಕೆಸವಳಲು, ಪ್ರಶಾಂತ್ ಹಂಡುಗುಳಿ, ಅಭಿಲಾಷ್ ಉಗ್ಗೆಹಳ್ಳಿ, ಸಂತೋಷ್ ಶುಭ ನಗರ, ಸುನಿಲ್ ಶೆಟ್ಟಿ, ಮಹೇಶ್, ಪ್ರಶಾಂತ್ ಬಿಳಗುಳ, ಸುಜಾತ, ಚಂದ್ರಾವತಿ ಬಿಳಗುಳ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.