ADVERTISEMENT

ನಿಗಮದ ಯೋಜನೆಗಳಿಂದ ಸಮುದಾಯದ ಬಲವರ್ಧನೆ

ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದಿಂದ ಮಾಹಿತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:14 IST
Last Updated 1 ನವೆಂಬರ್ 2025, 5:14 IST
ಮೂಡಿಗೆರೆ ಪಟ್ಟಣದ ಚರ್ಚ್ ಹಾಲ್‌ನಲ್ಲಿ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದಿಂದ ಶುಕ್ರವಾರ ನಡೆದ ಮಾಹಿತಿ‌ ಕಾರ್ಯಾಗಾರವನ್ನು ಸೇಂಟ್‌ ಅಂತೋಣಿ ಚರ್ಚ್ ಧರ್ಮಗುರು ಫಾ. ಸುನಿಲ್‌ ರೋಡ್ರಿಗ್ರೆಸ್ ಉದ್ಘಾಟಿಸಿದರು
ಮೂಡಿಗೆರೆ ಪಟ್ಟಣದ ಚರ್ಚ್ ಹಾಲ್‌ನಲ್ಲಿ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದಿಂದ ಶುಕ್ರವಾರ ನಡೆದ ಮಾಹಿತಿ‌ ಕಾರ್ಯಾಗಾರವನ್ನು ಸೇಂಟ್‌ ಅಂತೋಣಿ ಚರ್ಚ್ ಧರ್ಮಗುರು ಫಾ. ಸುನಿಲ್‌ ರೋಡ್ರಿಗ್ರೆಸ್ ಉದ್ಘಾಟಿಸಿದರು   

ಮೂಡಿಗೆರೆ: ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಯೋಜನೆಗಳಿದ್ದು, ಸಮುದಾಯದ ಬಲವರ್ಧನೆ ಸಾಧ್ಯವಾಗಿದೆ ಎಂದು ಅಲ್ಪಸಂಖ್ಯಾತ ನಿಗಮದ ಜಿಲ್ಲಾ ವ್ಯವಸ್ಥಾಪಕ ಸೈಯದ್ ಜುವೇದ್ ಪಾಷಾ ಹೇಳಿದರು.

ಪಟ್ಟಣದ ಚರ್ಚ್ ಹಾಲ್‌ನಲ್ಲಿ ಸೇಂಟ್‌ ಅಂತೋಣಿ ಅಸೋಸಿಯೇಷನ್ ಹಾಗೂ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ವತಿಯಿಂದ ಶುಕ್ರವಾರ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನಿಗಮದ ವತಿಯಿಂದ ಶೈಕ್ಷಣಿಕ ಅರಿವಿಗೆ ಕುಟುಂಬ ಯೋಜನೆಯಲ್ಲಿ ಸಿಇಟಿ, ನೀಟ್ ಮಾಡಿದ ವಿದ್ಯಾರ್ಥಿಗಳಿಗೆ ಮುಂದಿನ ವಿವಿಧ ಕೋರ್ಸುಗಳ ಶಿಕ್ಷಣಕ್ಕಾಗಿ ₹50 ಸಾವಿರದಿಂದ ₹5 ಲಕ್ಷದವರೆಗೆ ಸಾಲ ಸೌಲಭ್ಯವಿದೆ. ಬಳಿಕ, ವಿದೇಶ ಶಿಕ್ಷಣಕ್ಕಾಗಿ ಹೊಸ ಯೋಜನೆಯಂತೆ ಶೂನ್ಯ ಬಡ್ಡಿಯಲ್ಲಿ ₹20 ಲಕ್ಷ ಸಾಲ ಸೌಲಭ್ಯ ದೊರೆಯುತ್ತದೆ. ಇದಕ್ಕೆ ಆಸ್ತಿ ಭದ್ರತೆ ಇರುತ್ತದೆ. ಇನ್ನು ಆರ್ಥಿಕ ಅಭಿವೃದ್ಧಿ ಪಥದಲ್ಲಿ ಮಹಿಳೆಯರಿಗೆ ಶ್ರಮ ಶಕ್ತಿ ಯೋಜನೆಯಡಿ ₹50 ಸಾವಿರ ಸಹಾಯ ಧನ ನೀಡಲಾಗುತ್ತದೆ. ಅದರಲ್ಲಿ ₹25 ಸಾವಿರ ಸಬ್ಸಿಡಿ ಹಾಗೂ ₹25 ಸಾವಿರ ಸಾಲ ಮರುಪಾವತಿಸಬೇಕಾಗುತ್ತದೆ. ವಿಶೇಷ ಯೋಜನೆಯಡಿ ವಿಧವೆಯರಿಗೆ, ವಿವಾಹ ವಿಚ್ಛೇದನ ಪಡೆದವರಿಗೆ ₹50 ಸಾವಿರ ಸಾಲ ಸೌಲಭ್ಯವಿದ್ದು ಅದರಲ್ಲಿ ₹25 ಸಾವಿರ ಸಬ್ಸಿಡಿ ಸಿಗುತ್ತದೆ. ಗಂಗಾ ಕಲ್ಯಾಣ ಯೋಜನೆಯಡಿ 1 ಎಕರೆಯಿಂದ 5 ಎಕರೆವರೆಗೆ ಕೃಷಿ ಭೂಮಿ ನೀರಿನ ಅಭಾವವಿರುವ, ಮಳೆ ಆಧಾರಿತ ಭೂಮಿಗೆ ಕೊಳವೆ ಬಾವಿ, ಪಂಪ್‌ಸೆಟ್, ಮೋಟಾರ್ ಸಲಕರಣೆ ಹಾಗೂ ಮೆಸ್ಕಾಂ ಸಂಪರ್ಕಕ್ಕೆ ₹3 ಲಕ್ಷದವರೆಗೆ ಸಬ್ಸಿಡಿ ಯೋಜನೆಯಿದ್ದು, ವಿಶೇಷ ಯೋಜನೆಯಡಿ ಶೇ 6 ಬಡ್ಡಿಯಲ್ಲಿ ₹20 ಲಕ್ಷದವರೆಗೆ ಸಾಲ ಸೌಲಭ್ಯವಿದೆ ಎಂದು ಮಾಹಿತಿ ನೀಡಿದರು.

ADVERTISEMENT

ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೆಲ್ವಿನ್ ಲಸ್ರಾದೊ ಮಾತನಾಡಿ, ‘ಮಲೆನಾಡಲ್ಲಿ ಅಡಿಕೆ, ಕಾಫಿ ಕೃಷಿ ಹೆಚ್ಚಿರುವುದರಿಂದ ಅದರ ಬಗ್ಗೆ ಸರ್ಕಾರದ ಗಮನಕ್ಕೆ ತಂದು ತರೀ, ಖುಷ್ಕಿ ಮಾತ್ರವಲ್ಲದೆ ಕಾಫಿಗೂ ಯೋಜನೆಗಳು ಅನ್ವಯವಾಗುವಂತೆ ಆಗ್ರಹಿಸಲಾಗುತ್ತದೆ. ಅಭಿವೃದ್ಧಿ ನಿಗಮದ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿ ಸಮುದಾಯವು ಆರ್ಥಿಕ ಪ್ರಗತಿ ಸಾಧಿಸಬೇಕು’ ಎಂದರು.

ಸೇಂಟ್‌ ಅಂತೋಣಿ ಚರ್ಚ್ ಧರ್ಮಗುರು ಫಾ. ಸುನಿಲ್ ರೊಡ್ರಿಗಸ್ ಮಾತನಾಡಿ, ಕ್ರೈಸ್ತರು ಸರ್ಕಾರಿ ಸೌಲಭ್ಯ ಪಡೆಯಲು ನಿರಾಸಕ್ತಿ ತೋರುತ್ತಿರುವ ಕಾರಣ ಈ ನಿಗಮ ಉದಯವಾಗಿದೆ. ಸರ್ಕಾರಿ ಸೌಲಭ್ಯ ಪಡೆಯುವುದು ನಮ್ಮ ಹಕ್ಕಾಗಿರಬೇಕು ಎಂದರು.

ನಿಗಮದ ಅಧಿಕಾರಿ ಎಚ್.ಸಿ. ಹೇಮ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಅಕ್ರಂ, ಪ.ಪಂ. ಉಪಾಧ್ಯಕ್ಷ ಹೊಸ್ಕೆರೆ ರಮೇಶ್, ವಿವಿಧ ಚರ್ಚಿನ ಧರ್ಮ ಗುರುಗಳಾದ ಫಾ.ಸುನಿಲ್ ರೊಡ್ರಿಗಸ್, ಪೀಟರ್ ಬ್ರ್ಯಾಂಕ್, ಫಾ. ಪ್ರೇಮ್ ಲಾರೆನ್ಸ್ ಡಿಸೋಜ, ಫಾ. ವಿಲಿಯಂ ಬರ್ನಾರ್ಡ್, ಫಾ.ಜೇಮ್ಸ್ ಚಾರ್ಲಿ, ಸೇಂಟ್‌ ಅಂತೋಣಿ ಅಸೋಸಿಯೇಷನ್ ಅಧ್ಯಕ್ಷೆ ಐವಿ ಪಿಂಟೊ, ಕಾರ್ಯದರ್ಶಿಗಳಾದ ಜೋಸೆಫ್ ಎಂ, ಆಲ್ವಿನ್ ಪಿಂಟೊ, ಖಜಾಂಚಿ ಜೆಎನ್ ಜೆ ಲೋಬೊ, ವಿನ್ಸೆಂಟ್ ರೊಡ್ರಿಗಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.