ಮೂಡಿಗೆರೆ: ತಾಲ್ಲೂಕಿನಾದ್ಯಂತ ವಾರದಿಂದ ಸುರಿಯುತ್ತಿದ್ದ ಮಳೆಯು ಮಂಗಳವಾರ ಅಲ್ಪ ಪ್ರಮಾಣದಲ್ಲಿ ಇಳಿಮುಖ ಕಂಡಿತು. ನಸುಕಿನಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಧಾರಾಕಾರವಾಗಿ ಸುರಿದ ಮಳೆ ನಂತರ ಬಿಡುವು ನೀಡಿದೆ. ಬೆಳಿಗ್ಗೆ ಬಿಸಿಲು ಕಾಣಿಸಿಕೊಂಡು ಜನರು ನಿಟ್ಟುಸಿರು ಬಿಡುವಂತೆ ಮಾಡಿತು. ಮಧ್ಯಾಹ್ನದವರೆಗೂ ಬಿಸಿಲಿನಿಂದ ಕೂಡಿದ್ದು, ಮಧ್ಯಾಹ್ನದ ಬಳಿಕ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿತ್ತು.
ಮಳೆಯಿಂದ ಹಾನಿಯು ಮುಂದುವರಿದಿದ್ದು, ಬಗ್ಗಸಗೋಡು ಗ್ರಾಮದ ಶಿವಪ್ಪ ಎಂಬುವವರ ಮನೆಯ ಚಾವಣಿ, ಗೋಡೆ ಹಾನಿಯಾಗಿದೆ. ಗೌಡಳ್ಳಿ ಗ್ರಾಮದ ಜಗದೀಶ್ ಎಂಬುವವರ ಮನೆಯ ಮೇಲೆ ಬೃಹತ್ ಮರ ಬಿದ್ದು ನಷ್ಟ ಉಂಟಾಗಿದೆ. ಬಿದರಹಳ್ಳಿ ಗ್ರಾಮದ ಕುಶಾಲ್ ಎಂಬುವವರ ಮನೆಯ ಚಾವಣಿ, ಗೋಡೆ ಹಾನಿಗೊಳಗಾಗಿದೆ. ಬಾಳೂರು, ಕೂವೆ, ನಿಡ್ನಳ್ಳಿ, ಬಾನಹಳ್ಳಿ ಪ್ರದೇಶಗಳಲ್ಲಿ ಭೂ ಕುಸಿತವಾಗಿ ನಷ್ಟ ಸಂಭವಿಸಿದೆ.
ಶಾಸಕರ ಭರವಸೆ
ಆಲ್ದೂರು: ಸಮೀಪದ ಹವ್ವಳ್ಳಿ ಗ್ರಾಮದ ಮೋಟಮ್ಮ ಸೋಮಯ್ಯ ಅವರ ಮನೆ ಗೋಡೆ ಮಳೆಗೆ ಕುಸಿದಿದ್ದು, ಸೋಮವಾರ ಶಾಸಕ ಎಂ. ಪಿ. ಕುಮಾರಸ್ವಾಮಿ ಭೇಟಿ ನೀಡಿ ₹5 ಲಕ್ಷ ಪರಿಹಾರದ ಭರವಸೆ ನೀಡಿದರು. ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ನಾರಾಯಣ ಆಚಾರ್ಯ, ಮುಖಂಡರಾದ ನಾಗೇಶ್, ರಾಜಸ್ವ ನಿರೀಕ್ಷಕ ವೆಂಕಟೇಶ್ ಗ್ರಾಮ ಪಂಚಾಯತಿ ಸದಸ್ಯ ಗಿರೀಶ್ ಇದ್ದರು.
ಮನೆಗಳ ಕುಸಿತದ ಆತಂಕ
ಕೊಟ್ಟಿಗೆಹಾರ: ಬಣಕಲ್, ಕೊಟ್ಟಿಗೆಹಾರದಲ್ಲಿ ಸತತ ಮಳೆಯಿಂದ ಮನೆ ಕುಸಿತ ಘಟನೆಗಳು ಹೆಚ್ಚಾಗುತ್ತಿವೆ.
ಸೋಮವಾರ ರಾತ್ರಿ ಬಾಳೂರು ದರ್ಬಾರ್ ಪೇಟೆಯ ಸುಶೀಲಾ ಉಮೇಶ್ ಮನೆ ಕುಸಿತವಾಗಿದೆ. ಬಾಳೂರು ಭಾಗದಲ್ಲಿ ಈ ಹಿಂದೆ ಗಣೇಶ್ ಮನೆ ಕುಸಿತವಾಗಿತ್ತು. ಬಾಳೂರಿನ ಡಾಲ್ಫಿ ಡಿಸೋಜ ಮನೆಯ ತಡೆಗೋಡೆ ಕುಸಿತವಾಗಿದೆ.
ಸುಶೀಲಾ ಅವರ ಮನೆ ಕೂಡ ಕುಸಿದಿದೆ.
ಸುಂಕಸಾಲೆ ಸಮೀಪದ ದುರ್ಗದಹಳ್ಳಿಯ ಕೊಂಬಿನಡ್ಕ ಸುನಿಲ್ ಅವರ ಮನೆಯು ಎರಡು ದಿನಗಳ ಹಿಂದೆ ಮಳೆಗೆ ಕುಸಿತಗೊಂಡಿತ್ತು.ಈ ಸ್ಥಳಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಂಗಳವಾರ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಎ. ನಾಗರಾಜ್,ಬಿಜೆಪಿಯ ಮುಖಂಡರಾದ ವಿಜೇಂದ್ರ ಮರ್ಕಲ್,ಸತೀಶ್ ಬಾಳೂರು, ಪರೀಕ್ಷಿತ್ ಜಾವಳಿ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.