ADVERTISEMENT

ಮುತ್ತಿಗೆಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರವಾಸ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 5:09 IST
Last Updated 9 ಜನವರಿ 2026, 5:09 IST
ಮೂಡಿಗೆರೆ ತಾಲ್ಲೂಕಿನ ಮುತ್ತಿಗೆಪುರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಬುಧವಾರ ವಿಮಾನದಲ್ಲಿ ಪ್ರವಾಸ ಮಾಡಿದರು
ಮೂಡಿಗೆರೆ ತಾಲ್ಲೂಕಿನ ಮುತ್ತಿಗೆಪುರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಬುಧವಾರ ವಿಮಾನದಲ್ಲಿ ಪ್ರವಾಸ ಮಾಡಿದರು   

ಮೂಡಿಗೆರೆ (ಚಿಕ್ಕಮಗಳೂರು): ತಾಲ್ಲೂಕಿನ ಮುತ್ತಿಗೆಪುರ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ ಹೋಗುವ ಅವಕಾಶ ಲಭಿಸಿತ್ತು.

ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಹಾಗೂ ದಾನಿಗಳ ನೆರವಿನಿಂದ ಶಾಲೆಯ 5ನೇ ತರಗತಿ ಮೇಲ್ಪಟ್ಟ 32 ವಿದ್ಯಾರ್ಥಿಗಳು ಬುಧವಾರ ಶಿವಮೊಗ್ಗದಿಂದ ಬೆಂಗಳೂರು ವರೆಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಬೆಂಗಳೂರಿನ ಇಸ್ಕಾನ್, ವಿಧಾನಸೌಧ, ಲಾಲ್‌ಬಾಗ್, ಕಬ್ಬನ್ ಪಾರ್ಕ್, ಮೆಟ್ರೊ ನಿಲ್ದಾಣ ಸೇರಿ ಸುತ್ತಮುತ್ತಲ ಪ್ರವಾಸಿತಾಣಗಳಿಗೆ ಭೇಟಿ ನೀಡಿ ವಾಹನದಲ್ಲಿ ವಾಪಸ್ಸಾದರು.

‘ವಿಮಾನಯಾನ ಮಾಡಿದ ವಿದ್ಯಾರ್ಥಿಗಳು ಪುಳಕಗೊಂಡಿದ್ದಾರೆ. ನಮ್ಮ ಎಸ್‌ಡಿ‌ಎಂಸಿ, ಗ್ರಾಮ ಪಂಚಾಯಿತಿ ಹಾಗೂ ದಾನಿಗಳ ಸಹಕಾರದಿಂದ ನಮ್ಮ ಮಕ್ಕಳಿಗೂ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ‌ ದೊರೆತಿದೆ. ಇಂತಹ ಅವಕಾಶಗಳು ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಬೇಕಿದೆ’ ಎಂದು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಹೇಳಿದರು.

ADVERTISEMENT

'ನಮ್ಮ ಗ್ರಾಮದ ಮಕ್ಕಳು ವಿಮಾನದಲ್ಲಿ ಪ್ರಯಾಣಿಸಿರುವುದು ನಮಗೆ ಹೆಮ್ಮೆ. ದಾನಿಗಳ‌ ನೆರವಿದ್ದರೆ ಸರ್ಕಾರಿ ಶಾಲೆಗಳನ್ನು ಮಾದರಿಯಾಗಿ ಮಾಡಬಹುದು. ಮುಚ್ಚುತ್ತಿರುವ ಸರ್ಕಾರಿ ಶಾಲೆಗಳಿಗೆ ಮುತ್ತಿಗೆಪುರ ಶಾಲೆಯು ಮಾದರಿಯಾಗಿದೆ' ಎಂದು ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜಿತಾ ಅಭಿಪ್ರಾಯಪಟ್ಟರು. 

ಶಾಲೆಯಿಂದ ವಿಮಾನ ಪ್ರವಾಸಕ್ಕೆ ಹೊರಡುವ ಸಂದರ್ಭದಲ್ಲಿ ಮುಖ್ಯಶಿಕ್ಷಕಿ ಭಾರತಿ, ಹಳೇಮೂಡಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜಿತಾ, ಉಪಾಧ್ಯಕ್ಷೆ ಸೋನಿಯಾ ಕ್ರಾಸ್ತ, ಪಿಡಿಒ ವೀಣಾ, ದಾನಿಗಳಾದ ಮುದ್ರೆಮನೆ ಕಾಫಿ ಕ್ಯೂರಿಂಗ್ ಮಾಲೀಕ ಸಂತೋಷ್, ದಯಾಳ್ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುಧೀರ್, ಸದಸ್ಯರಾದ ಸುನಿಲ್ ಕುಮಾರ್, ರಾಜು ಪೂಜಾರಿ, ಮಧು, ವಿನ್ಸಿವಾಸು ಹಾಜರಿದ್ದು ಶುಭ‌ ಕೋರಿದರು.

ಮೂಡಿಗೆರೆಯ ಮುತ್ತಿಗೆಪುರದಿಂದ ಪ್ರವಾಸ ಹೊರಟ ವಿದ್ಯಾರ್ಥಿಗಳನ್ನು ಸ್ಥಳೀಯರು ಬುಧವಾರ ಬೀಳ್ಕೊಟ್ಟರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.