ADVERTISEMENT

ನರಸಿಂಹರಾಜಪುರ | ಅಂಬೇಡ್ಕರ್ ಶೋಷಿತ ವರ್ಗದ ಧೃವತಾರೆ: ಪ್ರಶಾಂತ್ ಎಲ್.ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:29 IST
Last Updated 8 ಡಿಸೆಂಬರ್ 2025, 6:29 IST
ನರಸಿಂಹರಾಜಪುರದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳ ಆಶ್ರಯದಲ್ಲಿ ನಡೆದ ಪರಿನಿರ್ವಾಣ ದಿನಾಚರಣೆಯಲ್ಲಿ ಮೆಣದ ಬತ್ತಿ ಬೆಳಗಿಸಿ ನಮನ ಸಲ್ಲಿಸಲಾಯಿತು. ಎಚ್.ಎಂ. ಶಿವಣ್ಣ ಬುದ್ಧನಮನ ಸಲ್ಲಿಸಿದರು
ನರಸಿಂಹರಾಜಪುರದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳ ಆಶ್ರಯದಲ್ಲಿ ನಡೆದ ಪರಿನಿರ್ವಾಣ ದಿನಾಚರಣೆಯಲ್ಲಿ ಮೆಣದ ಬತ್ತಿ ಬೆಳಗಿಸಿ ನಮನ ಸಲ್ಲಿಸಲಾಯಿತು. ಎಚ್.ಎಂ. ಶಿವಣ್ಣ ಬುದ್ಧನಮನ ಸಲ್ಲಿಸಿದರು   

ನರಸಿಂಹರಾಜಪುರ: ಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಷಿತ ವರ್ಗದ ಧೃವತಾರೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಬಣ್ಣಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಸಂಜೆ ವಿವಿಧ ದಲಿತ ಸಂಘಟನೆಗಳ ಆಶ್ರಯದಲ್ಲಿ ನಡೆದ ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ತಮ್ಮ ಅಸ್ತಿತ್ವ ಕಳೆದುಕೊಂಡು ಶೋಷಿತರಾಗಿ, ಅಸ್ಪೃಶ್ಯತೆಗೊಳಗಾಗಿದ್ದವರಿಗೆ ಅಂಬೇಡ್ಕರ್ ಅವರು ಆಶಾಕಿರಣವಾಗಿದ್ದವರು. ತಾನು ಅನುಭವಿಸಿದ ನೋವು, ಅಪಮಾನವನ್ನು ನನ್ನ ಸಮುದಾಯದವರು ಅನುಭವಿಸಬಾರದೆಂದು ಸಮುದಾಯದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದರು. ದೇಶಕ್ಕೆ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ನೀಡಿ ಪ್ರಸ್ತುತ ಎಲ್ಲರೂ ಸ್ವತಂತ್ರ, ಸಮಾನತೆ, ಸಹಬಾಳ್ವೆಯಿಂದ ಬದುಕುವಂತೆ ಮಾಡಿದ್ದಾರೆ. ಅವರ ಆಶಯಗಳು, ವಿಚಾರಧಾರೆಗಳು ಯುವಪೀಳಿಗೆಗೆ ಅನುಕರಣೀಯವಾಗಿವೆ. ಪಟ್ಟಣದ ಹೃದಯ ಭಾಗದ ವೃತ್ತಕ್ಕೆ ತಮ್ಮ ಅಧಿಕಾರ ಅವಧಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ವೃತ್ತದಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ಅನಾವರಣಗೊಳಿಸಲು ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.

ADVERTISEMENT

ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಬಿ.ಎಸ್. ನಿರಂಜನಗೌಡ ಮಾತನಾಡಿ, ‘ಸಮಾಜದಲ್ಲಿ ತುಳಿತಕ್ಕೊಳಗಾದವರ ಧ್ವನಿಯಾಗಿ, ಅನೇಕ ಅವಮಾನಗಳನ್ನು ಅನುಭವಿಸಿಯೂ ದೇಶಕ್ಕೆ ಸಂವಿಧಾನವನ್ನು ಕೊಟ್ಟ ಮಹಾನ ಚೇತನ ಬಾಬಾ ಸಾಹೇಬ ಅಂಬೇಡ್ಕರ್‌. ಅವರನ್ನು ಹಲವು ಧರ್ಮಗಳು ತಮ್ಮೆಡೆಗೆ ಸೆಳೆಯಲು ಪ್ರಯತ್ನಿಸಿದರೂ ಸಹ ಯಾವುದೇ ಧರ್ಮಕ್ಕೆ ಮತಾಂತರವಾಗದೇ ಹಿಂದೂ ಧರ್ಮದ ಭಾಗವಾದ ಬೌದ್ಧ ಧರ್ಮಕ್ಕೆ ಸೇರಿದರು. ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ದುಪಯೋಗಪಡಿಸಿಕೊಂಡರೆ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯವಿಲ್ಲ’ ಎಂದರು.

ಜಿಲ್ಲಾ ಎಸ್.ಸಿ, ಎಸ್.ಟಿ ದೌರ್ಜನ್ಯ ಸಮಿತಿ ಸದಸ್ಯ ಶೆಟ್ಟಿಕೊಪ್ಪ ಎಂ.ಮಹೇಶ್ ಮಾತನಾಡಿ, ಅಂಬೇಡ್ಕರ್ ಯಾರು ಎಂದು ತಿಳಿದುಕೊಳ್ಳಲು ಅವರು ಕೊಡುಗೆ ನೀಡಿರುವ ಸಂವಿಧಾನವನ್ನು ಮೊದಲು ಓದಬೇಕು. ಸಂವಿಧಾನಕ್ಕೆ ಗೌರವಕೊಡುವುದರೊಂದಿಗೆ ಸಂವಿಧಾನದಲ್ಲಿನ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ಹಿಂದೂ ಸಮಾಜದಲ್ಲಿದ್ದ ಅಸ್ಪೃಶ್ಯತೆ ಹೋಗಲಾಡಿಸಲು ಅಹಿಂಸಾ ಮಾರ್ಗದ ಬೌದ್ಧ ಧರ್ಮವನ್ನು ಸ್ವೀಕರಿಸಿ, ಅಸ್ಪೃಶ್ಯತೆಗೊಳಗಾದವರನ್ನು ಸಮಾಜದ ಮುಖ್ಯವಾಹಿನಿಗೆ ತಂದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.

ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ. ಶಿವಣ್ಣ ಮಾತನಾಡಿ, ಅಂಬೇಡ್ಕರ್ ಅವರು 6 ಡಿಸೆಂಬರ್ 1956ರಂದು ಮರಣಹೊಂದಿದರು. ಅವರ ಪುಣ್ಯ ಸ್ಮರಣೆಗಾಗಿ ಡಿ. 6ರಂದು ಇಡೀ ವಿಶ್ವದಾದ್ಯಂತ ಅಂಬೇಡ್ಕರ್ ಪರಿನಿರ್ವಾಣ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಜುಬೇದಾ, ಮಾಜಿ ಸದಸ್ಯರಾದ ಮುಕುಂದ, ಸೈಯದ್ ವಸೀಂ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಬಿ.ವಿ. ಉಪೇಂದ್ರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ. ಮಂಜುನಾಥ್, ತಾಲ್ಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಮಂಜುನಾಥ್, ಡಿಎಸ್ಎಸ್ ಜಿಲ್ಲಾ ಸಂಚಾಲಕ ಡಿ.ರಾಮು, ನಗರ ಘಟಕದ ಅಧ್ಯಕ್ಷ ಪಿಕಪ್ ಚಂದ್ರು, ಮುಖಂಡರಾದ ಚಿತ್ರಪ್ಪಯರಬಾಳ, ವಿಮಲ, ಪವಿತ್ರ, ಆಶಾ, ರವಿ, ಚಂದ್ರು, ಪ್ರವೀಣ್, ಶಿವರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.