ನರಸಿಂಹರಾಜಪುರ: ಕಸಬಾ ಹೋಬಳಿಯ ಬಾಳೆಕೊಪ್ಪ ಸರ್ವೆ ನಂ. 19ರಲ್ಲಿ ತಲಾ 2 ಎಕರೆಯಂತೆ 12 ಎಕರೆ ಜಮೀನು 1984–85ರಲ್ಲಿ ಮಂಜೂರಾಗಿದ್ದು, ಅದರಂತೆ ಜಮೀನಿಗೆ ಖಾತೆ ಮತ್ತು ಪಹಣಿ ನೀಡಿ, ಸರ್ವೆ ಮಾಡಿಸಿ ಸ್ವಾಧೀನಾನುಭವ ಕೊಡಿಸುವಂತೆ ಪೌರ ಕಾರ್ಮಿಕರ ಬೀದಿಯ ನಿವಾಸಿಗಳು ತಹಶೀಲ್ದಾರ್ ನೂರುಲ್ ಹುದಾ ಅವರಿಗೆ ಮನವಿ ಸಲ್ಲಿಸಿದರು.
ಜಮೀನು ಮಂಜೂರಾದ ಅವಧಿಯಿಂದ ಇದುವರೆಗೂ ಖಾತೆ ಮತ್ತು ಪಹಣಿ, ಚೆಕ್ ಬಂಧಿ, ಕಲ್ಲು ಬಾಂದು ಹಾಕಿಲ್ಲ. ಈ ಪ್ರಕರಣವು ಕಚೇರಿಯಿಂದ ಕಚೇರಿಗೆ ಪತ್ರ ವ್ಯವಹಾರದಲ್ಲೇ ಮುಂದುವರಿದಿದೆ. ಸಮಾಜದ ಕೆಲವು ಬಲಾಢ್ಯರು ಆರ್ಥಿಕ ಮತ್ತು ರಾಜಕೀಯ ಪ್ರಭಾವ ಬಳಸಿ ಅನಕ್ಷರಸ್ಥರಾದ ಮೂಲ ಮಂಜೂರುದಾರರಿಗೆ ಮೋಸ ಮಾಡಿ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮಂಜೂರುದಾರ ವಾರಸುದಾರರಾದ ಗೀತಾ, ರಂಗಯ್ಯ, ನಾಗಮ್ಮ, ಪಾರ್ವತಿ, ಶ್ರೀನಿವಾಸ್, ರತನಮ್ಮ, ಅಣ್ಣಯ್ಯ, ರಾಜು, ಲೋಕೇಶ್, ಪ್ರೇಮಲತಾ, ರತ್ನಮ್ಮ ಮನವಿಯಲ್ಲಿ ದೂರಿದ್ದಾರೆ.
ಕರ್ನಾಟಕ ಭೂ ಮಂಜೂರಾತಿ ನಿಯಮಗಳ ಪ್ರಕಾರ ಮತ್ತು ಸರ್ಕಾರದ ಆದೇಶದ ಪ್ರಕಾರ ಈ ಜಮೀನನ್ನು ಪರಿಶಿಷ್ಟ ಜಾತಿಯವರಿಗೆ ಮಂಜೂರು ಮಾಡಲಾಗಿದೆ. ಈ ರೀತಿ ಪಿಟಿಸಿಎಲ್ ಕಾಯ್ದೆ ಉಲ್ಲಂಘಿಸಿದ ಅಧಿಕಾರಿ ಮತ್ತು ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಹೈಕೋರ್ಟ್ ಆದೇಶದಂತೆ ಖಾತೆ ಮತ್ತು ಪಹಣಿ ನೀಡಿ ಸರ್ವೆ ಮಾಡಿಸಿ ಚೆಕ್ ಬಂಧಿ ಹಾಕಿಸಿ ಒತ್ತುವರಿ ಖುಲ್ಲಾ ಪಡಿಸಿ ಸ್ವಾಧಿನ ಅನುಭವವನ್ನು ಕೊಡಿಸುವಂತೆ ಒತ್ತಾಯಿದ್ದಾರೆ.
ದಲಿತ ಸಂಘರ್ಷ ಸಮಿತಿಯ ತರೀಕೆರೆ ವೆಂಕಟೇಶ್, ರಾಜೇಶ, ಭವಾನಿ, ಅಬ್ದುಲ್ ರೆಹಮಾನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.