
ನರಸಿಂಹರಾಜಪುರ: ‘ತಾಲ್ಲೂಕು ಕೇಂದ್ರದಿಂದ ಹೊನ್ನೆಕೂಡಿಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಭದ್ರಾ ಹಿನ್ನೀರಿಗೆ ಸಂಪರ್ಕ ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹44.50 ಕೋಟಿ ಅನುದಾನ ನೀಡಿದ್ದಾರೆ’ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.
ತಾಲ್ಲೂಕಿನ ಹಳೇ ಮಾಕೋಡು ಗ್ರಾಮದ ಸಮೀಪ ಭದ್ರಾ ಹಿನ್ನೀರಿಗೆ ₹38.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಸೇತುವೆಯನ್ನು ಶುಕ್ರವಾರ ಪರಿಶೀಲಿಸಿ ಅವರು ಮಾತನಾಡಿದರು.
ಸಂಪರ್ಕ ರಸ್ತೆ ನಿರ್ಮಾಣಕ್ಕೆ ₹6 ಕೋಟಿ ವೆಚ್ಚ ಮಾಡಲಾಗಿದೆ. ತಾಲ್ಲೂಕು ಕೇಂದ್ರಕ್ಕೆ ಹಿಂದೆ ಎಡೆಹಳ್ಳಿ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. 1915ರಲ್ಲಿ ಮೈಸೂರು ಯುವರಾಜ ಕಂಠೀರವ ತಾಲ್ಲೂಕಿಗೆ ಭೇಟಿ ನೀಡಿದ್ದರಿಂದ ನರಸಿಂಹರಾಜಪುರ ಎಂದು ನಾಮಕರಣವಾಯಿತು. 2017ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ತಾಲ್ಲೂಕಿಗೆ ಭೇಟಿ ನೀಡಿದಾಗ ನರಸಿಂಹರಾಜಪುರ ಎಂದು ನಾಮಕರಣಗೊಂಡು 100 ವರ್ಷದ ಸವಿನೆನಪಿಗೆ ಕೊಡುಗೆ ನೀಡಬೇಕೆಂದು ವಿನಂತಿಸಿದಾಗ, ಸಂಪರ್ಕ ಸೇತುವೆ ಮಂಜೂರು ಮಾಡಿ, ಅಂದು ₹4.90 ಕೋಟಿ ಅನುದಾನ ಬಿಡುಗಡೆ ಮಾಡಿ ಶಂಕುಸ್ಥಾಪನೆ ನೆರವೇರಿಸಿದ್ದರು. ಪ್ರಸ್ತುತ ನಿರ್ಮಾಣ ವೆಚ್ಚ ₹38.50 ಕೋಟಿಯಾಗಿದೆ ಎಂದರು.
ಮಳೆಗಾಲದಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗದಿರುವುದು, ಕೋವಿಡ್ ಸಂದರ್ಭದಲ್ಲಿ ಕಾಮಗಾರಿ ವಿಳಂಬವಾಗಿತ್ತು. ಪ್ರಸ್ತುತ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಸೇತುವೆ ಉದ್ಘಾಟನೆ ಮಾಡಲಿದ್ದಾರೆ. ಸೇತುವೆ ನಿರ್ಮಾಣದಿಂದ 20 ಕಿ.ಮೀ ಸುತ್ತಿಬಳಸಿ ಬರಬೇಕಾಗಿದ್ದ ಹೊನ್ನೆಕೂಡಿಗೆ ವ್ಯಾಪ್ತಿಯ ಹಲವು ಗ್ರಾಮದ ಜನರು, ಪ್ರಸ್ತುತ ನಾಲ್ಕೈದು ಕಿ.ಮೀನಲ್ಲಿ ಪಟ್ಟಣಕ್ಕೆ ತಲುಪಬಹುದು. ಸೇತುವೆ ನಿರ್ಮಾಣದ ಶ್ರೇಯಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಮಾಜಿ ಸದಸ್ಯ ಸುನಿಲ್ ಕುಮಾರ್, ಹಿರಿಯ ಮುಖಂಡ ನಾರಾಯಣಮೂರ್ತಿ ಇದ್ದರು.
ಹಿಂದುಳಿದ ವರ್ಗದವರ
ಸಮುದಾಯ ಭವನ ಕಾಮಗಾರಿ ವೀಕ್ಷಣೆ ಶೆಟ್ಟಿಕೊಪ್ಪದ ನವಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಹಿಂದುಳಿದ ವರ್ಗದವರ ಸಮುದಾಯ ಭವನ ಕಾಮಗಾರಿ ವೀಕ್ಷಣೆ ಮಾಡಿದ ಎಂ.ಶ್ರೀನಿವಾಸ್ ‘ಬಡವರ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕಾಂಗ್ರೆಸ್ ಸರ್ಕಾರ ಸಾವಿರಾರೂ ಕೋಟಿ ವೆಚ್ಚ ಮಾಡುತ್ತಿದೆ. ಶೆಟ್ಟಿಕೊಪ್ಪ ವ್ಯಾಪ್ತಿಯಲ್ಲಿ ಬಡವರು ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರು ಹೆಚ್ಚಾಗಿ ವಾಸವಾಗಿರುವ ಜನರ ಕಲ್ಯಾಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಈ ಭಾಗದಲ್ಲಿ ಸಮುದಾಯ ಭವನದ ಅವಶ್ಯಕತೆ ಬಗ್ಗೆ ಹಿಂದುಳಿದ ವರ್ಗದ ಮುಖಂಡ ಗಾಂಧಿಗ್ರಾಮ ನಾಗರಾಜು ಮತ್ತು ಗ್ರಾಮಸ್ಥರು ನನಗೆ ಹಾಗೂ ಶಾಸಕ ಟಿ.ಡಿ. ರಾಜೇಗೌಡ ಅವರಿಗೂ ಮನವಿ ಸಲ್ಲಿಸಿದ್ದರು. ಅನುದಾನ ಬಿಡುಗಡೆ ಮಾಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಅವರಿಗೆ ಮನವಿ ಮಾಡಲಾಗಿತ್ತು. ಮುಖ್ಯಮಂತ್ರಿಗಳು ಸಮುದಾಯ ಭವನಕ್ಕೆ ₹50 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ. ಸಮುದಾಯ ಭವನದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದರು. ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ಗಾಂಧಿಗ್ರಾಮ ನಾಗರಾಜು ಕಾರ್ಯದರ್ಶಿ ಡಿ.ಆರ್. ಈಶ್ವರ್ ಗ್ರಾಮಸ್ಥರಾದ ಎಂ. ಮಹೇಶ್ ಕೆ. ಮೋಹನ್ ಸಚಿನ್ ಎಸ್.ಎಸ್. ಶ್ರೀನಿವಾಸ್ ಬಿ.ಆರ್. ವೆಂಕಟೇಶ್ ಆರ್. ಸಂಕೇತ ದೇವರಾಜ್ ಜಯರಾಮ್ ಸುಧಾಕರ್ ಆಚಾರ್ ಎಲ್ದೊ ದೇವೆಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.