ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ. ಕಣಬೂರು ಗ್ರಾಮದ ಕೊರಲಕೊಪ್ಪದಲ್ಲಿ ಕಬ್ಬೆಕ್ಕು ಶಿಕಾರಿ ಮಾಡಿ, ಅದನ್ನು ಸುಡುತ್ತಿದ್ದ ಆರೋಪದ ಮೇಲೆ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
ಎ. ಅತೀಶ್, ವಾಸು, ಉಮೇಶ್ ಬಂಧಿತ ಆರೋಪಿಗಳು. ಶುಕ್ರವಾರ ಬೆಳಗಿನ ಜಾವ 4 ಗಂಟೆ ವೇಳೆಗೆ ನರಸಿಂಹರಾಜಪುರ ಅರಣ್ಯ ಇಲಾಖೆಯ ಸಿಬ್ಬಂದಿ ಕೊರಲಕೊಪ್ಪದ ತೋಟವೊಂದರ ಮೇಲೆ ದಾಳಿ ಮಾಡಿದಾಗ, ಮೂವರು ಆರೋಪಿಗಳು ಕಬ್ಬೆಕ್ಕು ಶಿಕಾರಿ ಮಾಡಿ ಅದನ್ನು ಸುಡುತ್ತಿರುವುದು ಕಂಡುಬಂದಿತ್ತು. ಆರೋಪಿಗಳಿಂದ ಬಂದೂಕು ಹಾಗೂ ಮೃತ ಕಬ್ಬೆಕ್ಕನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಮೇಲೆ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿಗಳಾದ ಗೌಸ್ ಮಹಿಯುದ್ದೀನ್, ಎಸ್. ರಘು, ಗಸ್ತು ಪಾಲಕರಾದ ಎನ್. ಸತೀಶ್, ರಾಘವೇಂದ್ರ, ವಾಹನ ಚಾಲಕ ಸುದೀಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.