ಕೆ.ಕಣಬೂರು (ನರಸಿಂಹರಾಜಪುರ): ಮುತ್ತಿನಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಕೆ.ಕಣಬೂರಿನಲ್ಲಿ ಕಾಡು ಹಂದಿಗಳ ಹಿಂಡು ರಾತ್ರಿ ವೇಳೆ ಅಡಿಕೆ ತೋಟಗಳಿಗೆ ನುಗ್ಗಿ, 2ರಿಂದ 4 ವರ್ಷದ ಅಡಿಕೆ ಗಿಡಗಳನ್ನು ಬುಡ ಸಮೇತ ಕಿತ್ತು ಹಾಕುತ್ತಿವೆ ಎಂದು ರೈತರು ತಿಳಿಸಿದ್ದಾರೆ.
ಕೆ.ಕಣಬೂರು ಗ್ರಾಮದ ಕೊರಲಕೊಪ್ದಪ ರೈತರಾದ ನಾಗೇಂದ್ರ, ಮೋಹನ್ ಗೌಡ, ಶ್ರೀಪಾಲ, ತಮ್ಮಣ್ಣ ಗೌಡರ ತೋಟಗಳಿಗೆ ಕಳೆದ ಎರಡು ದಿನಗಳಿಂದ ಹಂದಿಗಳ ಹಿಂಡು ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ. ನಾಗೇಂದ್ರ ಅವರ ತೋಟದಲ್ಲಿ 125 ಅಡಿಕೆ ಗಿಡ, ಶ್ರೀಪಾದ ಅವರ ತೋಟದಲ್ಲಿ 20 ಅಡಿಕೆ ಗಿಡ, ತಮ್ಮಣ್ಣ ಅವರ ತೋಟದಲ್ಲಿ 15 ಗಿಡಗಳನ್ನು ಧರೆಗುರುಳಿಸಿವೆ.
5ವರ್ಷದಿಂದ ಕಷ್ಟಪಟ್ಟು ಬೆಳೆದ ಅಡಿಕೆ ಗಿಡಗಳನ್ನು 2 ದಿನದಲ್ಲಿ ಹಂದಿಗಳು ಬುಡ ಸಮೇತ ಕಿತ್ತುಹಾಕಿವೆ. ಅರಣ್ಯ ಇಲಾಖೆ ಕೂಡಲೇ ಕ್ರಮವಹಿಸಿ ತೋಟ ಉಳಿಸಿ, ಸೂಕ್ತ ಪರಿಹಾರ ನೀಡಬೇಕು ಎಂದು ರೈತ ನಾಗೇಂದ್ರ ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ತೋಟಕ್ಕೆ ಭೇಟಿ ನೀಡಿ, ಕಾಡು ಹಂದಿಗಳು ಕಿತ್ತು ಹಾಕಿದ್ದ ಅಡಿಕೆ ಗಿಡಗಳನ್ನು ಪರಿಶೀಲಿಸಿದರು.
ಕಾಡಾನೆಗಳ ಉಪಟಳದಿಂದ ನೆಮ್ಮದಿ ಕಳೆದುಕೊಂಡಿದ್ದ ರೈತರು, ಇದೀಗ ಕಾಡು ಹಂದಿಗಳ ಕಾಟದಿಂದ ಮತ್ತಷ್ಟು ಹೈರಾಣಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.