
ವಿಜಯಕುಮಾರ್ ಎಸ್.ಕೆ.
ಚಿಕ್ಕಮಗಳೂರು: ಮಲೆನಾಡು ನಕ್ಸಲ್ ಮುಕ್ತವಾದ ಬಳಿಕ ನಕ್ಸಲ್ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಮುಂದಾಗಿದ್ದು, ₹9.12 ಕೋಟಿ ಬಿಡುಗಡೆ ಮಾಡಿದೆ.
ಅರಣ್ಯ ಸಮಸ್ಯೆ, ಭೂಮಿಯ ಸಮಾನ ಹಂಚಿಕೆ, ಮೂಲ ಸೌಕರ್ಯ, ಉದ್ಯೋಗ, ಸಮಾನ ವೇತನ ಬೇಡಿಕೆಗಳೊಂದಿಗೆ ನಕ್ಸಲ್ ಹೋರಾಟ ಆರಂಭವಾಯಿತು. ಈ ಪ್ರದೇಶಗಳಲ್ಲಿ ಈಗಲೂ ಹಲವು ಹಳ್ಳಿಗಳಿಗೆ ರಸ್ತೆ ಸೇರಿದಂತೆ ಮೂಲಸೌಕರ್ಯ ಇಲ್ಲವಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೆಸರಿನಲ್ಲಿ ಕಾಡಂಚಿನ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಶುರುವಾಗಿ ನಾಲ್ಕೈದು ದಶಕಗಳೇ ಕಳೆದಿವೆ. ಅತಂತ್ರ ಸ್ಥಿತಿಯ ನಡುವೆ ಕಾಡಿನ ಜನರ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿದೆ.
ನಕ್ಸಲ್ ಚಳವಳಿ 25 ವರ್ಷಗಳ ಬಳಿಕ 2025ರಲ್ಲಿ ಅಂತ್ಯ ಕಂಡಿತು. ವಿಕ್ರಂ ಗೌಡ ಎನ್ಕೌಂಟರ್ ಬಳಿಕ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಮುಂದೆ ಎಲ್ಲ ಏಳು ನಕ್ಸಲರು ಶರಣಾಗತಿ ಸಮಿತಿ ಮುಂದೆ ಹಾಜರಾದರು.
ಎಲ್ಲರನ್ನು ಮುಖ್ಯವಾಹಿನಿಗೆೆ ಬರ ಮಾಡಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ನಕ್ಸಲ್ ಮುಕ್ತ ರಾಜ್ಯ ಎಂದು ಘೋಷಣೆ ಮಾಡಿದರು. ಬಳಿಕ 2025–26ನೇ ಸಾಲಿನ ಬಜೆಟ್ನಲ್ಲಿ ನಕ್ಸಲ್ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ₹10 ಕೋಟಿ ಅನುದಾನ ಘೋಷಣೆ ಮಾಡಿದರು.
ಸರ್ಕಾರ ಈಗ ಬಿಡುಗಡೆ ಮಾಡಿರುವ ₹9.12 ಕೋಟಿಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಖ್ಯವಾಹಿನಿಗೆ ಬಂದ ನಕ್ಸಲರ ಪ್ರೋತ್ಸಾಹ ಧನಕ್ಕಾಗಿ (ಸ್ವಯಂ ಉದ್ಯೋಗಕ್ಕೆ) ₹27.10 ಲಕ್ಷ ನೀಡಿದೆ. ಮೂಲಸೌಕರ್ಯ ಕಾಮಗಾರಿಗಾಗಿ ಉಡುಪಿ ಜಿಲ್ಲೆಗೆ ₹ 2 ಕೋಟಿ, ಚಿಕ್ಕಮಗಳೂರು ಜಿಲ್ಲೆಗೆ ₹7.12 ಕೋಟಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.