ಆನೆ
ಬಾಳೆಹೊನ್ನೂರು: ಬನ್ನೂರು ಬಳಿಯಲ್ಲಿ ಅನಿತಾ ಹಾಗೂ ಅಂಡವಾನೆಯ ಸುಬ್ರಾಯಗೌಡರ ಸಾವಿಗೆ ಕಾರಣವಾದ ಎರಡು ಆನೆಗಳನ್ನು ಹಿಡಿಯಲು ಮುಖ್ಯ ವನ್ಯಜೀವಿ ಪರಿಪಾಲಕರು ಅನುಮತಿ ನೀಡಿದ್ದಾರೆ ಎಂದು ಭಾನುವಾರ ಪ್ರಕಟಣೆ ಹೊರಡಿಸಿದ್ದ ಅರಣ್ಯ ಇಲಾಖೆ, ಇದೀಗ ಯೂ ಟರ್ನ್ ಹೊಡೆದಿದೆ.
ಮಂಗಳವಾರ ಸುಮಾರು 14 ವರ್ಷದ ಮರಿಯಾನೆಯನ್ನು ಸೆರೆಹಿಡಿದು ಸಕ್ರೇಬೈಲಿಗೆ ಕಳುಹಿಸಿದ ನಂತರ ಹಿಡಿಯಲು ಬಂದಿದ್ದ ಆನೆಗಳು, ಮಾವುತರು ಬುಧವಾರ ವಿಶ್ರಾಂತಿ ಪಡೆದರು.
ಒಂದೇ ಆನೆ ಹಿಡಿಯಲು ಮಾತ್ರ ಅನುಮತಿ ದೊರೆತಿತ್ತು. ಇಬ್ಬರ ಮನೆಯ ಬಳಿ ಮೂಡಿದ್ದ ಆನೆಯ ಹೆಜ್ಜೆಯ ಗುರುತನ್ನು ಪರೀಕ್ಷಿಸಿದಾಗ ಬುಧವಾರ ಸೆರೆ ಹಿಡಿದ ಆನೆಯೇ ದಾಳಿ ನಡೆಸಿದ್ದು ಖಚಿತವಾಗಿದೆ. ಮಾನವರಿಗೆ ತೊಂದರೆ ಉಂಟು ಮಾಡಬಹುದಾದ ಆನೆಗಳನ್ನು ಮಾತ್ರ ಸ್ಥಳಾಂತರಿಸಲು ಇಲಾಖೆ ಅನುಮತಿ ನೀಡುತ್ತಿದೆ. ಕುಂಚೂರಿನಲ್ಲಿ ಉಪಟಳ ನೀಡುತ್ತಿರುವ ಆನೆ ಸೇರಿದಂತೆ ಯಾವ್ಯಾವ ಆನೆಗಳು ಮಾನವರಿಗೆ ತೊಂದರೆ ಉಂಟು ಮಾಡಬಹುದು ಎಂಬುದನ್ನು ಪರಿಶೀಲಿಸಿ ಸ್ಥಳಾಂತರಿಸಲು ಅನುಮತಿ ಕೋರಿದ್ದೇವೆ.ಮೇಲಿನ ಅಧಿಕಾರಿಗಳು ಅನುಮತಿ ನೀಡಿದ ತಕ್ಷಣ ಕಾರ್ಯಾಚರಣೆ ಆರಂಭಗೊಳ್ಳಲಿದೆ. ಅಂಡವಾನೆಯಲ್ಲಿರುವ ಆನೆಗಳು ಸಕ್ರೇಬೈಲಿಗೆ ವಾಪಾಸ್ ಆಗಲಿವೆ.ಮುಂದಿನ ಕಾರ್ಯಾಚರಣೆ ವೇಳೆ ಮತ್ತೆ ಅವುಗಳನ್ನು ಕರೆಸಿಕೊಳ್ಳಲಾಗುವುದು ಎಂದು ಕೊಪ್ಪ ಡಿಎಫ್ಒ ಶಿವಶಂಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.