ನರಸಿಂಹರಾಜಪುರ: ತಾಲ್ಲೂಕು ವ್ಯಾಪ್ತಿಗೆ ಕೊರೊನಾ ವೈರಸ್ ಪೀಡಿತ ರಾಜ್ಯ ಮತ್ತು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಊರಿಗೆ ಹಿಂದಿರುಗಿ ಬರುತ್ತಿರುವುದರಿಂದ ಹಸಿರು ವಲಯದ ನಿವಾಸಿಗಳಲ್ಲಿ ಆತಂಕವನ್ನುಂಟು ಮಾಡಿದೆ.
ಪ್ರಮುಖವಾಗಿ ತಾಲ್ಲೂಕು ವ್ಯಾಪ್ತಿಗೆ ಇದೇ ಶುಕ್ರವಾರದವರೆಗೆ ಹೊರರಾಜ್ಯ ಮತ್ತು ಜಿಲ್ಲೆಗಳಿಂದ 157 ಜನರು ಬಂದಿದ್ದಾರೆ. ಇದರಲ್ಲಿ ಬೆಂಗಳೂರಿನಿಂದ 66, ಉಡುಪಿಯಿಂದ 11, ಮಂಗಳೂರು 31, ಮೈಸೂರಿನಿಂದ 6, ಆಂಧ್ರಪ್ರದೇಶ 3, ವಿಜಯಪುರ 4, ಹಾವೇರಿ 4, ತಮಿಳುನಾಡು 4, ಹಾವೇರಿ 4, ಹೊಸಪೇಟೆ 2, ಮಂಡ್ಯ 2, ರಾಮನಗರ 1, ತುಮಕೂರು 2, ಚಾಮರಾಜನಗರ 3, ದಾವಣಗೆರೆ 3, ಹೀಗೆ ಬೇರೆ, ಬೇರೆ ಊರುಗಳಿಂದ ದಿನದಿಂದ ದಿನಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಬೇರೆ ಕಡೆಯಿಂದ ಬಂದ ಬಹುತೇಕರನ್ನು ಆರೋಗ್ಯ ಇಲಾಖೆಯವರು ಮನೆ, ಮನೆಗೆ ತೆರಳಿ ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡಿಸಿ ಮನೆಯಲ್ಲಿಯೇ ಇರುವಂತೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ, ಕೆಲವರು ಸೋಂಕು ಪೀಡಿತ ಜಿಲ್ಲೆ ಅಥವಾ ರಾಜ್ಯಗಳಿಂದ ಬಂದರೂ ಮಾಹಿತಿ ನೀಡದಿರುವುದು ಅಥವಾ ಆಸ್ಪತ್ರೆಯ ಸಿಬ್ಬಂದಿ ನೀಡುವ ಸಲಹೆಗಳನ್ನು ಪಾಲಿಸಿ ಕ್ವಾರಂಟೈನಲ್ಲಿ ಉಳಿಯದೆ ಹೊರಗೆ ಒಡಾಡುತ್ತಿರುವ ಪ್ರಸಂಗಗಳು ನಡೆಯುತ್ತಿರುವುದು ಆಸ್ಪತ್ರೆ ಸಿಬ್ಬಂದಿಗೂ ಸಮಸ್ಯೆಯಾಗಿ ಪರಿಣಮಿಸಿದೆ.
ತಾಲ್ಲೂಕಿನ ಸಿಂಸೆ ಗ್ರಾಮಕ್ಕೆ ಶುಕ್ರವಾರ ಚೆನ್ನೈನಿಂದ ಮೂರು ಜನ ಸಾಫ್ಟ್ವೇರ್ ಎಂಜಿನಿಯರ್ಗಳು ಬಂದಿದ್ದು, ಮುಂಜಾಗ್ರತ ಕ್ರಮವಾಗಿ ಅವರನ್ನು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದಲ್ಲಿ ಸ್ಥಾಪಿಸಿರುವ ಸೂಪರ್ ವೈಸ್ಡ್ ಐಸೋಲೇಷನ್ ಸೆಂಟರ್ನಲ್ಲಿ ಕ್ವಾರೆಂರಂಟೈನ್ ಮಾಡಲಾಗಿದೆ. ಒಂದು ವೇಳೆ ಕೋವಿಡ್ ಲಕ್ಷಣಗಳು ಕಂಡುಬಂದರೆ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ವೀರಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
ಇನ್ನು ಮುಂದೆ ಹೊರ ರಾಜ್ಯದಿಂದ ಬರುವ ಎಲ್ಲರನ್ನೂ ಕಡ್ಡಾಯವಾಗಿ ಸೂಪರ್ ವೈಸ್ಡ್ ಐಸೋಲೇಷನ್ ಸೆಂಟರ್ನಲ್ಲಿ ಕ್ವಾರಂಟೈನ್ ಮಾಡಲಾಗುವುದು. ಹೊರ ಜಿಲ್ಲೆಯಿಂದ ಬಂದವರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.