
ಸೀತೂರು (ನರಸಿಂಹರಾಜಪುರ): ‘ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಗಾಂಧಿ ತತ್ವ ಅಡಗಿದೆ’ ಎಂದು ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಉದಯಕುಮಾರ್ ಹೇಳಿದರು.
ತಾಲ್ಲೂಕಿನ ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿರುವ ನರಸಿಂಹರಾಜಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಶಿಬಿರದ ಎರಡನೇ ದಿನದ (ಭಾನುವಾರ) ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧಿ ಜನ್ಮದಿನದ 100 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ 1969ರಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಪ್ರಾರಂಭವಾಯಿತು. ಗಾಂಧೀಜಿ ಕನಸು ಕಂಡ ಗ್ರಾಮ ಸ್ವರಾಜ್ಯ, ಗ್ರಾಮ ಸ್ವಚ್ಛತೆ, ಸೇವೆಯನ್ನು ಯೋಜನೆಯಲ್ಲಿ ಅಳವಡಿಸಲಾಗಿದೆ. 7 ದಿನಗಳ ಶಿಬಿರದಲ್ಲಿ ಶಿಬಿರಾರ್ಥಿಗಳು ಗ್ರಾಮ ಸ್ವಚ್ಛತೆ, ಕೆರೆ ಅಭಿವೃದ್ಧಿ, ನದಿ ಮೂಲ ಸ್ವಚ್ಛತೆ ಮಾಡಬಹುದು ಎಂದರು.
ಇತ್ತೀಚಿನ ವರ್ಷಗಳಲ್ಲಿ ಎನ್.ಜಿ.ಒ.ಗಳು ರಾಜಕೀಯ ಹಿಡಿತಕ್ಕೆ ಸಿಕುತ್ತಿವೆ. ಕೆಲವು ಎನ್ಜಿಒಗಳು ಪ್ರಕೃತಿ, ಅರಣ್ಯ ಉಳಿಸಿ ಎಂದು ಹೋರಾಟ ಮಾಡುತ್ತಾರೆ. ಆದರೆ, ಮನುಷ್ಯರ ಬದುಕುವ ಹಕ್ಕನ್ನು ಕಡೆಗಾಣಿಸುತ್ತಾರೆ. ಪ್ರಕೃತಿ, ಕಾಡು, ನೀರು ಸಂರಕ್ಷಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ಪ್ರಕೃತಿ ಹಸ್ತಾಂತರಿಸುವ ಜವಬ್ದಾರಿ ನಮ್ಮ ಮೇಲಿದೆ ಎಂದರು.
ಸೀತೂರು ವಿ.ಎಸ್.ಎಸ್.ಎನ್. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅನಿಲ್ ಕುಮಾರ್ ಮಾತನಾಡಿ, ಮಹಾತ್ಮ ಗಾಂಧಿ ಕಂಡ ಕನಸು ಸೀತೂರು ಗ್ರಾಮದಲ್ಲಿ ಸಾಕಾರಗೊಂಡಿದೆ. ಇಲ್ಲಿ ಉತ್ತಮ ಸಹಕಾರ ಸಂಘ, ಶಾಲೆ, ಗ್ರಾಮ ಪಂಚಾಯಿತಿ ಇದೆ. ಸಹಕಾರಿ ಕ್ಷೇತ್ರದಲ್ಲಿ ಉದ್ಯೋಗಕ್ಕೆ ವಿಪುಲ ಅವಕಾಶವಿದ್ದು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬಹುದು ಎಂದರು.
ಸೀತೂರು ವಿ.ಎಸ್.ಎಸ್.ಎನ್. ಉಪಾಧ್ಯಕ್ಷೆ ಎಂ.ಎಸ್. ಗೀತಾ, ಮುಖಂಡ ಮಂಜುನಾಥ್, ಎಸ್ಎಸ್ಎಸ್ ಶಿಬಿರಾಧಿಕಾರಿಗಳಾದ ಎಸ್.ಡಿ. ಸತೀಶ್, ಜೆ.ಎಸ್. ಶಂಕರ ನಾಯ್ಕ್, ವಿದ್ಯಾರ್ಥಿನಿಯರಾದ ಕವನ, ಅಫ್ರೀನ್, ನಿಶ್ಮಿತಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.