ಮೂಡಿಗೆರೆ: ಮುಸ್ಲಿಂ ಸಮುದಾಯದವರ ಸರ್ವಾಂಗೀಣ ಬೆಳವಣಿಗೆಯಲ್ಲಿ ಖಾಝಿ ಪಾತ್ರ ಪ್ರಮುಖವಾಗಿದೆ ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ರಾಷ್ಟ್ರೀಯ ಅಧ್ಯಕ್ಷ ಸೈಯ್ಯದುಲ್ ಉಲಮಾ ಜಿಪ್ರಿ ಮುತ್ತುಕೋಯ ತಂಙಳ್ ಅಭಿಪ್ರಾಯಪಟ್ಟರು.
ಸಮೀಪದ ಹಾಂದಿ ಗ್ರಾಮದ ರಾಯಲ್ ಶಾಲಿಮಾರ್ ಹಾಲ್ನಲ್ಲಿ ತಾಲ್ಲೂಕು ಸಂಯುಕ್ತ ಜಮಾತ್ ಒಕ್ಕೂಟದ ವತಿಯಿಂದ ಬುಧವಾರ ಏರ್ಪಡಿಸಿದ್ದ 14 ಮಸೀದಿಗಳ ವ್ಯಾಪ್ತಿಯ ನೂತನ ಖಾಝಿ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನೂತನ ಖಾಝಿ ಸೈಖುನಾ ಕೊಯ್ಯೋಡು ಪಿ.ಪಿ.ಉಮ್ಮರ್ ಮುಸ್ಲಿಯಾರ್ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿ, ‘ಕೇರಳ ಹಾಗೂ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದ ಸಾಮಾಜಿಕ ಕ್ಷೇತ್ರದಲ್ಲಿ ಒಂದೇ ರೀತಿಯ ಸಮಾನತೆ ನಡೆಯುತ್ತಿದೆ. ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರ ಈ ಮೂರು ಕಡೆ ವಿಭಿನ್ನ ಪದ್ಧತಿ ಸಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಗುಣಾತ್ಮಕವಾಗಿ ಪರಿಗಣಿಸಿ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಗುಣಮಟ್ಟಕ್ಕೆ ಭಂಗ ಬರದಂತೆ ಎಚ್ಚರಿಕೆ ವಹಿಸಿ ಭಾರತೀಯ ಸಂವಿಧಾನಕ್ಕೆ ಬದ್ಧವಾಗಿ ಕರ್ತವ್ಯ ನಿರ್ವಹಿಸಲಾಗುವುದು’ ಎಂದರು.
ತಾಲ್ಲೂಕು ಸಂಯುಕ್ತ ಜಮಾತ್ ಒಕ್ಕೂಟದ ಅಧ್ಯಕ್ಷ ಅಬ್ಲುಲ್ಲಾ ಹಾಜಿ, ಧಾರ್ಮಿಕ ವಿದ್ವಾಂಸರಾದ ಎನ್.ಪಿ.ಎಂ. ಝೈನುಲ್ ಅಬಿದಿನ್ ತಂಙಳ್, ಕೆ.ಎಸ್. ಅಲಿ ತಂಙಳ್ ಕುಂಬೋಳ್, ಬಿ.ಕೆ. ಅಬ್ದುಲ್ ಖಾದರ್ ಅಲ್ ಕಾಸಿಮಿ ಬಂಬ್ರಾಣ, ಅಮೀರ್ ತಂಙಳ್, ಇರ್ಷಾಧ್ ದಾರಿಮಿ ಮಿತ್ತಬೈಲ್, ಖತೀಬ್ ಯಾಕೂಬ್ ದಾರಿಮಿ, ಸಿನಾನ್ ಫೈಝಿ, ಹಂಝಾ ಮುಸ್ಲಿಯಾರ್, ಸಿ.ಕೆ. ಇಬ್ರಾಹಿಂ, ಕೆ. ಮಹಮ್ಮದ್, ಎ.ಸಿ. ಅಯೂಬ್ ಹಾಜಿ, ಎ.ಕೆ. ಇಸಾಕ್ ಭೂತನಕಾಡು, ಇಬ್ರಾಹಿಂ ಶಾಲಿಮಾರ್, ಅಕ್ರಂ ಹಾಜಿ, ಸುಲೇಮಾನ್ ಮುಸ್ಲಿಯಾರ್, ನಜೀರ್ ಹಾಜಿ, ಸಲೀಂ ಪೈಝಿ ಇರ್ಫಾನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.