ಮುಡಿಪು: ಕೊಣಾಜೆ ಠಾಣಾ ವ್ಯಾಪ್ತಿಯ ಮೊಂಟೆಪದವು ಬಳಿ ದ್ವಿಚಕ್ರ ವಾಹನ, ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಸಾರ್ವಜನಿಕರು ಕೊಣಾಜೆ ಪೊಲೀಸರಿಗೆ ಒಪ್ಪಿಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಮೊಂಟೆಪದವಿನ ತಾರಾನಾಥ ಯಾನೆ ಮೋಹನ ಬಂಧಿತ ಆರೋಪಿ.
ಆರೋಪಿಯು ಶನಿವಾರ ಮೊಂಟೆಪದವಿನ ಮನೆಯೊಂದರ ಅಂಗಳದಲ್ಲಿದ್ದ ದ್ವಿಚಕ್ರ ವಾಹನವನ್ನು ಕದ್ದು ಪರಾರಿಯಾಗಿದ್ದ. ಮರುದಿನ ಮನೆ ಮಂದಿ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದಾಗ ತಾರಾನಾಥ ಕೃತ್ಯ ಎಸಗಿರುವುದು ಬೆಳಕಿದೆ ಬಂದಿದೆ. ಭಾನುವಾರ ರಾತ್ರಿ ಆತನ ಮನೆ ಬಳಿಗೆ ಹೋದಾಗ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಆತನನ್ನು ಬೆನ್ನಟ್ಟಿದ್ದ ಸಾರ್ವಜನಿಕರು, ಹಿಡಿದು ಕೊಣಾಜೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ಆರೋಪಿಯು ಕೆಲವು ತಿಂಗಳ ಹಿಂದೆ ಮನೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾಗ ಮನೆ ಮಂದಿ ಎಚ್ಚರಗೊಂಡಿದ್ದರಿಂದ ತಾನು ಬಂದಿದ್ದ ಸ್ಕೂಟರ್ ಬಿಟ್ಟು ಪರಾರಿಯಾಗಿದ್ದ. ಪೊಲೀಸರಿಗೆ ಹೆದರಿ ಖುದ್ದು ಠಾಣೆಗೆ ಹಾಜರಾದ ಆತನನ್ನು ಕೊಣಾಜೆ ಪೊಲೀಸರು ಮುಚ್ಚಳಿಕೆ ಬರೆಸಿ, ಕಳುಹಿಸಿದ್ದರು.
ಆರು ತಿಂಗಳ ಹಿಂದೆಯೇ ಉಚ್ಚಾಟನೆ: ‘ಮೊಂಟೆಪದವಿನ ವಿಶ್ವಹಿಂದೂ ಪರಿಷತ್, ಬಜರಂಗದಳ ವೀರಾಂಜನೇಯ ಶಾಖೆಯ ಹಿಂದಿನ ಸಂಚಾಲಕನಾಗಿದ್ದ ತಾರನಾಥನನ್ನು 6 ತಿಂಗಳ ಹಿಂದೆಯೇ ಸಂಘಟನೆಯ ಜವಾಬ್ದಾರಿಯಿಂದ ವಿಮುಕ್ತಿಗೊಳಿಸಲಾಗಿತ್ತು’ ಎಂದು ಬಜರಂಗದಳದ ಜಿಲ್ಲಾ ಸಂಚಾಲಕರಾದ ಪುನೀತ್ ಅತ್ತಾವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಸಮಾಜಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡ ಕಾರಣದಿಂದಾಗಿ ಅತನನ್ನು ಉಚ್ಚಾಟಿಸಲಾಗಿತ್ತು. ಆದ್ದರಿಂದ ಆತ ಎಸಗಿದ ಕೃತ್ಯಗಳಿಗೂ ಸಂಘಟನೆಗೂ ಯಾವುದೇ ಸಂಬಂಧವಿರುವುದಿಲ್ಲ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.