ಶೃಂಗೇರಿ: ‘ಬೇಗಾರು ಗ್ರಾ.ಪಂ. ವ್ಯಾಪ್ತಿಯ ಅಣ್ಕುಳಿಯಲ್ಲಿ ಮಳೆ-ಗಾಳಿಯಿಂದಾಗಿ 38 ದಿನಗಳಿಂದ ವಿದ್ಯುತ್ ನಿಲುಗಡೆಯಾಗಿದ್ದು, ಕುಡಿಯುವ ನೀರು ಮತ್ತು ಬೆಳಕು ಇಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಮೆಸ್ಕಾಂ ಕೇಂದ್ರ ಕಚೇರಿ ಮಂಗಳೂರಿಗೆ ಸಂಪರ್ಕಿಸಿದಾಗ ಸ್ಥಳೀಯ ಇಲಾಖೆಗೆ ಸಮಸ್ಯೆ ಬಗೆಹರಿಸುವಂತೆ ಆದೇಶ ನೀಡಿದ್ದರೂ, ಇಂದಿಗೂ ವಿದ್ಯುತ್ ಸರಬರಾಜು ಸ್ಥಗಿತವಾಗಿದೆ’ ಎಂದು ಕೃಷಿಕ ಅಣ್ಕುಳಿ ನಂದನ್ ದೂರಿದರು.
ಶೃಂಗೇರಿಯ ಮೆಸ್ಕಾಂ ಇಲಾಖೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ‘ಸ್ಥಳೀಯ ಇಲಾಖೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದ್ದರೂ, ಸಮಸ್ಯೆ ಹೀಗೆ ಮುಂದುವರಿದಿದೆ’ ಎಂದು ಅಳಲು ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದೀಪಕ್, ‘ಜಲ್ಜೀವನ್ ಯೋಜನೆಯಡಿ ಈಗಾಗಲೇ ಅಲ್ಲಿ ಟಿ.ಸಿ ಅಳವಡಿಸಲಾಗಿದೆ. ಅದರಿಂದ ಸಂಪರ್ಕ ನೀಡಲು ಬಾಕಿ ಇದ್ದು, ತಕ್ಷಣ ಸಮಸ್ಯೆ ಬಗೆಹರಿಸುತ್ತೇವೆ’ ಎಂದರು.
ರೈತ ರಾಮಚಂದ್ರ ಹಾಲಂದೂರು ಮಾತನಾಡಿ, ಅಂಗುರ್ಡಿಯ ವಿದ್ಯುತ್ ಸ್ಥಾವರದಿಂದ ಹಾಲಂದೂರು ಭಾಗಕ್ಕೆ ವಿದ್ಯುತ್ ಸಂಪರ್ಕ ನೀಡಿದರೆ, ನಮ್ಮ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಪ್ರಸ್ತುತ ವಿದ್ಯುತ್ ಮಾರ್ಗ ಸುತ್ತಿಬಳಸಿ ಬಂದಿದ್ದು, ತಕ್ಷಣ ನೂತನ ಮಾರ್ಗ ಕಲ್ಪಿಸಬೇಕು’ ಎಂದರು.
ರೈತ ಉಳುವೆ ಚಂದ್ರಶೇಖರ್ ಮಾತನಾಡಿ, ‘ನಮ್ಮ ಮನೆಗೆ ನಾಲ್ಕು ತಿಂಗಳಿನಿಂದ ವಿದ್ಯುತ್ ರೀಡಿಂಗ್ ಮಾಡಲು ಸಿಬ್ಬಂದಿ ಬರುತ್ತಿಲ್ಲ. ಪ್ರತಿ ತಿಂಗಳು ಬಿಲ್ ನೀಡಿದರೆ ಪಾವತಿಸಲು ಸುಲಭ, ಆದರೆ ಒಟ್ಟುಗೂಡಿದ ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ’ ಎಂದು ಅಧಿಕಾರಿಗಳ ಬಳಿ ಅಳಲು ತೋಡಿಕೊಂಡರು.
ಉಳುವೆ ಚಂದ್ರಶೇಖರ್, “ನಮ್ಮ ಮನೆಗೆ ನಾಲ್ಕು ತಿಂಗಳಿನಿಂದ ವಿದ್ಯುತ್ ರೀಡಿಂಗ್ ಮಾಡಲು ಸಿಬ್ಬಂದಿ ಬರುತ್ತಿಲ್ಲಲ. ಪ್ರತಿ ತಿಂಗಳು ಬಿಲ್ ನೀಡಿದರೆ ಪಾವತಿಸಲು ಸುಲಭ, ಆದರೆ ಒಟ್ಟುಗೂಡಿದ ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ” ಎಂದು ಅಳಲನ್ನು ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೊಪ್ಪ ವೃತ್ತದ ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಶ್, ‘ವಿದ್ಯುತ್ ರೀಡಿಂಗ್ ಸಿಬ್ಬಂದಿ ಹೊರಗುತ್ತಿಗೆಯವರು. ಅವರ ಬಳಿ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುತ್ತೇವೆ’ ಎಂದರು.
ಹೊಳೆಕೊಪ್ಪ ರಾಮಪ್ಪ ನಾಯ್ಕ್ ಮಾತನಾಡಿ, ‘60 ವರ್ಷ ಹಳೆಯ ಮರದ ವಿದ್ಯುತ್ ಕಂಬವನ್ನು ಬದಲಿಸಿ, ಕಾಂಕ್ರೀಟ್ ಕಂಬ ಅಳವಡಿಸಿ ಎಂದು ಇಲಾಖೆಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದರು.
ಅತ್ತುವಳ್ಳಿ ಕೃಷ್ಣಪ್ಪ ಮಾತನಾಡಿ, ‘22 ಕುಟುಂಬಗಳು ವಾಸವಾಗಿರುವ ಈ ಭಾಗದಲ್ಲಿ ಬೇಸಿಗೆಯಲ್ಲಿ ವೋಲ್ಟೇಜ್ ಸಮಸ್ಯೆ ಇದೆ. ತೋಟಗಳ ಮಧ್ಯೆ ಹಾದುಹೋಗಿರುವ ವಿದ್ಯುತ್ ಲೈನ್ ಅನ್ನು ರಸ್ತೆ ಸಮೀಪ ಸ್ಥಳಾಂತರಿಸಬೇಕು’ ಎಂದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾನೋಳ್ಳಿ ಚಂದ್ರಶೇಖರ್ ಮಾತನಾಡಿ, ‘ಅಂಗುರ್ಡಿಯಿಂದ ಕಾನುವಳ್ಳಿ ತನಕ ಹಳೇ ಸಂಪರ್ಕ ಇರುವ ವಿದ್ಯುತ್ ಲೈನ್ ಸ್ಥಗಿತಗೊಂಡಿದೆ. ಅದರ ಕಂಬ ಹಾಗೂ ತಂತಿಯನ್ನು ಕೂಡಲೇ ತೆರವುಗೊಳಿಸಿ’ ಎಂದು ಇಲಾಖೆಗೆ ಸಲಹೆ ನೀಡಿದರು.
ಜಿಲ್ಲಾ ಮೆಸ್ಕಾಂ ಅಧೀಕ್ಷಕ ಮಂಜುನಾಥ್, ಮೆಸ್ಕಾಂ ಅಧಿಕಾರಿಗಳಾದ ಹೇಮಂತ್, ಕೃಷ್ಣಾನಂದ, ರಂಗಣ್ಣ, ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ, ಸದಸ್ಯ ಕವೀಶ್, ಕೊಡುರು ರಾಜು, ದೀಪಕ್, ಪೂರ್ಣೇಶ್ ಗೌಡ, ಅನಂತಯ್ಯ, ಬಂಡ್ಲಾಪುರ ಶ್ರೀಧರ್ ರಾವ್, ಜಮಾಲ್ ಸಾಹೇಬ್ ಇದ್ದರು.
ಬಿಲ್ ಬಾರದೆ ಇದ್ದಲ್ಲಿ ಇಲಾಖೆ ಸಂಪರ್ಕಿಸಿ
ಮಳೆ-ಗಾಳಿಯಿಂದಾಗಿ ಸಂಭವಿಸಿದ ಸಮಸ್ಯೆಗಳನ್ನು ಈ ಬಾರಿ ಕ್ಷಿಪ್ರಗತಿಯಲ್ಲಿ ಸರಿಪಡಿಸಿದ್ದೇವೆ. ಇನ್ನೂಳಿದ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತೇವೆ. ಸ್ಥಳೀಯ ಸಮಸ್ಯೆ ಕುರಿತು ಗ್ರಾಹಕರು ನಮಗೆ ಮಾಹಿತಿ ನೀಡಿದರೆ ಆ ಭಾಗದ ಲೈನ್ಮ್ಯಾನ್ ಕಳುಹಿಸಿ ಕೋಡುತ್ತೇವೆ. ಗ್ರಾಹಕರಿಗೆ ಸರಿಯಾದ ಸಮಯದಲ್ಲಿ ಬಿಲ್ ಬಾರದೆ ಇದ್ದಲ್ಲಿ ಹಣ ಪಾವತಿಸಲು ಇಲಾಖೆಗೆ ಬರಬಹುದು ಅಥವಾ ಇಲಾಖೆಯ ಮೊ.ಸಂ: 9480833024 8277882865ಗೆ ಕರೆ ಮಾಡಬಹುದು ಎಂದು ಜಿಲ್ಲಾ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.