ಚಿಕ್ಕಮಗಳೂರು:ನಗರದ ರಸ್ತೆಗಳ ಗುಂಡಿ ಮುಚ್ಚಲು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಕ್ರಮ ವಹಿಸದಿದ್ದರೆ, ಅವರ ವಿರುದ್ಧ ಪ್ರತಿ ವಾರ್ಡುಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಇಲ್ಲಿ ಸೋಮವಾರ ಎಚ್ಚರಿಕೆ ನೀಡಿದರು.
ದಂಟರಮಕ್ಕಿ ಬಳಿ 20 ದಿನಗಳ ಹಿಂದೆ ರಸ್ತೆಗುಂಡಿಗೆ ಯುವತಿ ಆಯತಪ್ಪಿ ಬಿದ್ದು ಸಾವನ್ನಿಪ್ಪಿದ್ದಾಳೆ. ಆದರೂ ಇಲ್ಲಿನ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಸಿ.ಟಿ.ರವಿ ಎಚ್ಚೆತ್ತುಕೊಂಡಿಲ್ಲ. ರಸ್ತೆ ದುರಸ್ತಿಗೆ ಕ್ರಮ ವಹಿಸಿಲ್ಲ. ಪಕ್ಷದ ಕಾರ್ಯಕರ್ತರು ಸ್ಥಳೀಯರೊಂದಿಗೆ ಸೇರಿ ಇನ್ನೆರೆಡು ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
‘ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯದ 36 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿದ್ದೇನೆಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ, ರಾಜ್ಯದ ಜಿಲ್ಲೆಗಳ ಸಂಖ್ಯೆ ಬಗ್ಗೆ ಜನರನ್ನು ಗೊಂದಲಕ್ಕೀಡು ಮಾಡಿದ್ದಾರೆ. ಸಂಘಟನಾತ್ಮಕ ಜಿಲ್ಲೆಗಳ ಕುರಿತು ಪಕ್ಷದ ಸಭೆಯಲ್ಲಿ ಮಾತಾಡಿಕೊಳ್ಳಬೇಕು. ಅದನ್ನು ಬಿಟ್ಟು ಜನರಿಗೆ ದಾರಿ ತಪ್ಪಿಸಬಾರದು’ ಎಂದು ಟೀಕಿಸಿದರು.
ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಟಿ ನೀಡಿ, ಜನರ ಸಮಸ್ಯೆ ಆಲಿಸಿದ್ದಾರೆ. ಆದರೆ ಜಿಲ್ಲೆಗೆ ಎರಡು ಬಾರಿ ಬೇಟಿ ನೀಡಿದ ನಳೀನ್ ಕುಮಾರ್ ಕಟೀಲ್ ಅವರು ಪಕ್ಷದ ಸಭೆಗಳಿಗೆ ಮಾತ್ರ ಸೀಮಿತರಾಗಿದ್ದಾರೆ. ಸ್ಥಳೀಯ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಗೋಜಿಗೆ ಹೋಗುತ್ತಿಲ್ಲ ಎಂದು ಲೇವಡಿ ಮಾಡಿದರು.
ಮುಖಂಡ ಹಿರೇಮಗಳೂರು ರಾಮಚಂದ್ರ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಅವನತಿ ಆರಂಭವಾಗಿದೆ. ಹಿರೇಮಗಳೂರು ಪ್ರಾಥಮಿಕ ಸಹಕಾರ ಬ್ಯಾಂಕಿನ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಹೆಚ್ಚು ಸ್ಥಾನ ಪಡೆದು ಮುನ್ನಡೆ ಸಾಧಿಸಿವೆ ಎಂದರು.
ಪಕ್ಷದ ತಾಲ್ಲೂಕು ವಕ್ತಾರ ರೂಬೆನ್ ಮೊಸೆಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.