ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಖಾಂಡ್ಯ ಹೋಬಳಿ ಬಿದಿರೆ ಗ್ರಾಮದ ಚಂದ್ರವಳ್ಳಿಯಲ್ಲಿ ನಿವೇಶನ ರಹಿತರು ನಡೆಸುತ್ತಿರುವ ಪ್ರತಿಭಟನೆ ಸೋಮವಾರ 10ನೇ ದಿನಕ್ಕೆ ಕಾಲಿಟ್ಟಿದೆ. ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ ಮತ್ತು ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಕಾರರ ಜೊತೆ ಮಾತುಕತೆ ನಡೆಸಿದರು.
ನಿಗದಿತ ಜಾಗದಲ್ಲಿ ನಿವೇಶನ ನೀಡುವಂತೆ ಒತ್ತಾಯಿಸಿ 9 ದಿನಗಳಿಂದ 80ಕ್ಕೂ ಅಧಿಕ ನಿವೇಶನರಹಿತರು ಟೆಂಟ್ ನಿರ್ಮಿಸುವ ಮೂಲಕ ಪ್ರತಿಭಟನೆಯಲ್ಲಿ ತೊಡಗಿದ್ದರು.
ಶಾಸಕರ ಜತೆ ಡಿಎಫ್ಒ ಕ್ರಾಂತಿ, ತಹಶೀಲ್ದಾರ್ ವಿನಾಯಕ ಸಾಗರ್ ಮಾತುಕತೆ ನಡೆಸಿದರು.
‘ಸಮಸ್ಯೆಯನ್ನು ಜಿಲ್ಲಾಧಿಕಾರಿಯ ಗಮನಕ್ಕೆ ತರಲಾಗುವುದು. ಸಣ್ಣಪುಟ್ಟ ತೊಡಕುಗಳನ್ನು ನಿವಾರಿಸಲಾಗುತ್ತದೆ. ಶೀಘ್ರದಲ್ಲೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಟಿ.ಡಿ.ರಾಜೇಗೌಡ ಆಶ್ವಾಸನೆ ನೀಡಿದರು.
ಆದರೆ, ಅವರ ಮಾತಿಗೆ ಒಪ್ಪದ ನಿವೇಶನರಹಿತರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.
ಮುತ್ತೊಡಿ ವಲಯದ ಆರ್ಎಫ್ಒ ಕಿರಣ್ ಕುಮಾರ್, ವನಪಾಲಕ ಸಲೀಂ, ಮೈಲಾರಪ್ಪ, ಸಂತೋಷ್, ಬಿದಿರೆ ಗ್ರಾಮ ಪಂಚಾಯಿತಿ ಪಿಡಿಒ ವಿಶ್ವನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜತ್ತಿ, ಉಪಾಧ್ಯಕ್ಷ ಸುರೇಶ್ ಗೌಡ, ಸದಸ್ಯ ಸುರೇಶ್, ಯಶೋದಾ, ಮಂಜುನಾಥ್, ಮುಖಂಡರಾದ ಎಸ್.ಜೆ.ಜಯಶೀಲ್, ವಿ.ಸಿ.ರಘುಪತಿ, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ. ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.