ಚಿಕ್ಕಮಗಳೂರು: ವರನಟ ರಾಜ್ಕುಮಾರ್ ಅವರ ನಟನೆ ಹಾಗೂ ನಡವಳಿಕೆ ಮೀರಿಸಿದವರು ಪುನೀತ್ ರಾಜ್ಕುಮಾರ್ ಎಂದು ಡಾ.ರಾಜ್ಕುಮಾರ್ ಅಭಿಮಾನಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಾ.ರಾ. ಗೋವಿಂದು ಹೇಳಿದರು.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪುನೀತ್ ರಾಜ್ ಕುಮಾರ್ ಪ್ರತಿಮೆ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಪುನೀತ್ ಇರದಿದ್ದರೂ, ಅವರ ಸಮಾಜ ಸೇವೆ, ಆದರ್ಶಗಳು ನಮ್ಮ ಮುಂದಿವೆ. ಅವುಗಳನ್ನು ಪಾಲಿಸಿದರೆ ಅದೇ ಅವರಿಗೆ ನೀಡುವ ಗೌರವ’ ಎಂದರು.
ಪುನೀತ್ ಮಾಡಿದ ಎಲ್ಲ ಕೆಲಸಗಳನ್ನು ಅವರ ಪತ್ನಿ ಅಶ್ವಿನಿ ಮುಂದುವರೆಸುತ್ತಿರುವುದು ಹೆಮ್ಮೆಯ ವಿಚಾರ. ಕರ್ನಾಟಕದಲ್ಲಿ ಕನ್ನಡ ಉಳಿದು, ಕನ್ನಡ ತಲೆ ಎತ್ತಿ ನಡೆಯುತ್ತಿದ್ದರೆ ಅದು ರಾಜ್ ಕುಮಾರ್ ಹೋರಾಟದ ಫಲ. ಇದಕ್ಕೆ ಗೋಕಾಕ್ ಚಳುವಳಿಯೇ ಉದಾಹರಣೆ. ಕೇಂದ್ರ ಸರ್ಕಾರ ಕನ್ನಡದ ಮೇಲೆ ಹಿಂದಿಯನ್ನು ಏರುವ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಅವಕಾಶ ನೀಡಕೂಡದು ಎಂದರು.
ರಾಜಕೀಯ ಸೇರಿದಂತೆ ದೇಶ, ವಿದೇಶಗಳಲ್ಲಿ ನಟಿಸುವ ಅವಕಾಶ ಇದ್ದರೂ ಬೇರೆ ಭಾಷೆ ಕಡೆ ನೋಡದ ಏಕೈಕ ವ್ಯಕ್ತಿ ರಾಜ್ ಕುಮಾರ್. ಹಾಗಾಗಿಯೇ ಪಕ್ಷಾತೀತವಾಗಿ ಎಲ್ಲರೂ ಅವರ ಕುಟುಂಬವನ್ನು ಗೌರವಿಸುತ್ತಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಮಾತನಾಡಿ, ‘ಕನ್ನಡ ಚಲನಚಿತ್ರಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಿದ್ದರೆ ಅದಕ್ಕೆ ದೊಡ್ಡ ಕೊಡುಗೆ ನೀಡಿದವರು ರಾಜ್ ಕುಮಾರ್’ ಎಂದರು.
ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್, ಜಿಲ್ಲಾ ರಾಜ್ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಓಂಕಾರೇಗೌಡ, ಶಾಸಕ ಎಚ್.ಡಿ. ತಮ್ಮಯ್ಯ, ಟಿ.ಡಿ. ರಾಜೇಗೌಡ, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಸದಸ್ಯೆ ರೂಪಾ ಕುಮಾರ್, ಜೆ.ಪಿ. ಕೃಷ್ಣೇಗೌಡ, ಉಮಾ ಐ.ಬಿ. ಶಂಕರ್, ಎಂ.ಎಲ್. ಮೂರ್ತಿ, ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.