ADVERTISEMENT

ಚಿಕ್ಕಮಗಳೂರು | ಮಳೆ: ₹106 ಮೌಲ್ಯದ ಸಾರ್ವಜನಿಕ ಆಸ್ತಿ ಹಾನಿ

ರಸ್ತೆ, ಸೇತುವೆ, ವಿದ್ಯುತ್ ಕಂಬಗಳ ಹಾನಿಯಿಂದ ಹೆಚ್ಚು ನಷ್ಟ

ವಿಜಯಕುಮಾರ್ ಎಸ್.ಕೆ.
Published 5 ಸೆಪ್ಟೆಂಬರ್ 2025, 4:30 IST
Last Updated 5 ಸೆಪ್ಟೆಂಬರ್ 2025, 4:30 IST
ಮೂಡಿಗೆರೆ ತಾಲ್ಲೂಕಿನ ತತ್ಕೊಳ ರಸ್ತೆಯಲ್ಲಿ ವಿದ್ಯುತ್ ಕಂಬ ಬಿದ್ದಿರುವುದು
ಮೂಡಿಗೆರೆ ತಾಲ್ಲೂಕಿನ ತತ್ಕೊಳ ರಸ್ತೆಯಲ್ಲಿ ವಿದ್ಯುತ್ ಕಂಬ ಬಿದ್ದಿರುವುದು   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಾಲ್ಕು ತಿಂಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಈವರೆಗೆ ₹106 ಕೋಟಿಗೂ ಅಧಿಕ ಮೌಲ್ಯದ ಸಾರ್ವಜನಿಕ ಆಸ್ತಿಗೆ ಹಾನಿಯಾಗಿದೆ.

ಮೇ ತಿಂಗಳಲ್ಲಿ ಆರಂಭವಾಗಿರುವ ಮಳೆ ಬಿಟ್ಟು ಬಿಡದೆ ಸುರಿಯುತ್ತಲೇ ಇದೆ. ಆಗಸ್ಟ್ ಅಂತ್ಯದ ತನಕ ನಿರಂತರವಾಗಿ ಸುರಿದಿದ್ದು, ಈಗಲೂ ಮಳೆ ಸಣ್ಣದಾಗಿ ಮುಂದುವರಿದಿದೆ. ಜನವರಿಯಿಂದ ಈವರೆಗಿನ ಜಿಲ್ಲೆಯ ಸರಾಸರಿ ವಾಡಿಕೆ ಮಳೆ ಪ್ರಮಾಣ 146 ಸೆಂಟಿ ಮೀಟರ್ ಆಗಿದ್ದರೆ, ಈ ಬಾರಿ 159 ಸೆಂಟಿ ಮೀಟರ್ ಮಳೆಯಾಗಿದೆ.

ರಸ್ತೆ, ಸೇತುವೆ, ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ, ವಿದ್ಯುತ್ ಕಂಬ, ವಿದ್ಯುತ್ ತಂತಿ ಹಾನಿ ಅಧಿಕವಾಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ ತಾಲ್ಲೂಕಿನಲ್ಲಿ ಹೆಚ್ಚಿನದಾಗಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳು ಮತ್ತು ಜಿಲ್ಲಾ ಪ್ರಮುಖ ರಸ್ತೆಗಳು ಹಾಳಾಗಿವೆ. ರಸ್ತೆ ಮತ್ತು ಸೇತುವೆ ಹಾನಿಯಿಂದ ₹56.89 ಕೋಟಿಯಷ್ಟು ನಷ್ಟವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಂದಾಜಿಸಿದೆ.

ADVERTISEMENT

ಒಟ್ಟು 471 ಕಿಲೋ ಮೀಟರ್ ಗ್ರಾಮೀಣ ರಸ್ತೆ ಹಾಳಾಗಿದ್ದರೆ, 46 ಸೇತುವೆಗಳಿಗೆ ಹಾನಿಯಾಗಿದೆ. ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ರಸ್ತೆಗಳು ಹಾನಿಗೀಡಾಗಿವೆ. ಇದೇ ತಾಲ್ಲೂಕಿನಲ್ಲಿ ಗ್ರಾಮೀಣ ಭಾಗದಲ್ಲಿನ ಸೇತುವೆಗಳಿಗೂ ಹೆಚ್ಚಿನದಾಗಿ ಹಾಳಾಗಿವೆ. ಗ್ರಾಮೀಣ ರಸ್ತೆ ಮತ್ತು ಸೇತುವೆ ಹಾನಿಯಿಂದ ₹44.46 ಕೋಟಿ ನಷ್ಟವಾಗಿದೆ ಎಂದು  ಜಿಲ್ಲಾ ಪಂಚಾಯಿತಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಅಂದಾಜಿಸಿದ್ದಾರೆ.

3,253 ವಿದ್ಯುತ್ ಕಂಬ, 65 ಕಿಲೋ ಮೀಟರ್ ವಿದ್ಯುತ್ ತಂತಿ ಹಾಳಾಗಿದ್ದು, ಮಲೆನಾಡಿನ ಭಾಗದಲ್ಲೇ ಹೆಚ್ಚಿನದಾಗಿ ಹಾನಿಯಾಗಿದೆ. ₹5.55 ಕೋಟಿಯಷ್ಟು ನಷ್ಟವಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ಇನ್ನು 281 ಅಂಗನವಾಡಿ ಕಟ್ಟಡ, 151 ಶಾಲಾ ಕಟ್ಟಡ ಮತ್ತು 55 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳಿಗೂ ಹಾನಿಯಾಗಿದೆ.

ಬೆಳೆನಷ್ಟ ಕಡಿಮೆ
ನಿರಂತರವಾಗಿ ಮಳೆ ಸುರಿಯುತ್ತಿದ್ದು ಆದರೂ ಬೆಳೆನಷ್ಟದ ಪ್ರಮಾಣ ಅಷ್ಟಾಗಿ ಆಗಿಲ್ಲ ಎನ್ನುತ್ತಿವೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಂಕಿ–ಅಂಶಗಳು. ಶೃಂಗೇರಿ ಕೊಪ್ಪ ಮತ್ತು ಅಲ್ಪ ಪ್ರಮಾಣದಲ್ಲಿ ಚಿಕ್ಕಮಗಳೂರಿನಲ್ಲಿ ಕೃಷಿ ಬೆಳೆಗಳ ಹಾನಿಯನ್ನು ಇಲಾಖೆ ಗುರುತಿಸಿದ್ದು ಒಟ್ಟು 8.29 ಹೆಕ್ಟೇರ್‌ನಷ್ಟು ಹಾನಿಯಾಗಿದೆ. ತೋಟಗಾರಿಕೆ ಬೆಳೆ ಎನ್.ಆರ್.ಪುರ ತಾಲ್ಲೂಕಿನಲ್ಲಿ 1.44 ಹೆಕ್ಟೇರ್‌ನಷ್ಟು ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾಫಿ ಬೆಳೆಹಾನಿ ಅಂದಾಜಿಸಲು ಆಗ್ರಹ
ನಿರಂತರ ಮಳೆಯಿಂದ ಕಾಫಿ ಬೆಳೆ ಕೊಳೆ ರೋಗದ ಕಾಟದಿಂದ ಬಳಲಿದೆ. ಜುಲೈನಲ್ಲೇ ಕಾಣಿಸಿಕೊಂಡ ಕೊಳೆ ರೋಗದಿಂದ ಕಾಫಿ ಫಸಲು ಉದುರಿ ಸಾಕಷ್ಟು ಪ್ರಮಾಣದಲ್ಲಿ ನೆಲ ಕಚ್ಚಿದೆ. ಕಾಫಿ ಮಂಡಳಿಯ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ. ನಂತರ ಮಳೆ ನಿರಂತರವಾಗಿ ಮುಂದುವರಿದ್ದು ಮತ್ತಷ್ಟು ಬೆಳೆಹಾನಿಗೀಡಾಗಿದೆ. ಕಾಫಿ ಜತೆಗೆ ಮಲೆನಾಡಿನ ಪ್ರಮುಖ ಬೆಳೆಗಳಾದ ಕಾಳುಮೆಣಸು ಮತ್ತು ಅಡಿಕೆ ಬೆಳೆಯಲ್ಲಿ ಕೊಳೆರೋಗ ಕಾಡಿದೆ. ನಷ್ಟವನ್ನು ಅಂದಾಜಿಸಿ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂಬುದು ಬೆಳೆಗಾರರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.