
ಮೂಡಿಗೆರೆ: ತಾಲ್ಲೂಕಿನಾದ್ಯಂತ ಐದು ದಿನಗಳಿಂದ ಮಳೆ ಮುಂದುವರಿದಿದ್ದು, ಭಾನುವಾರವೂ ಉತ್ತಮ ಮಳೆ ಸುರಿದಿದೆ. ಶನಿವಾರ ತಡರಾತ್ರಿಯಂದ ಭಾನುವಾರ ನಸುಕಿನವರೆಗೂ ಎಡಬಿಡದೇ ಮಳೆ ಸುರಿಯಿತು. ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ 3ಕ್ಕೆ ಪ್ರಾರಂಭವಾದ ಮಳೆ ಒಂದು ಗಂಟೆ ಧಾರಾಕಾರವಾಗಿ ಸುರಿಯಿತು.
ಮಳೆಯಿಂದ ಗೋಣಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿ. ಹೊಸಳ್ಳಿಯ ಲಕ್ಷ್ಮಮ್ಮ ಎಂಬುವವರ ಮನೆ ಕುಸಿದಿದ್ದು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕುದ್ರೆಗುಂಡಿ ಬಳಿ ರಸ್ತೆಗೆ ಮರ ಉರುಳಿದ್ದು, ಸಂಚಾರದಲ್ಲಿ ವ್ಯತಯವಾಗಿತ್ತು.
ಚಾರ್ಮಾಡಿ ಬಂದ್ ವದಂತಿ: ಮಳೆಯಿಂದ ತಾಲ್ಲೂಕಿನ ಚಾರ್ಮಾಡಿ ಘಾಟಿ ಬಂದ್ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ್ದರಿಂದ ವಾಹನ ಸವಾರರು ಪರದಾಡಿದರು. ಕೆಲವು ಸರಕು ಸಾಗಾಣೆ ವಾಹನಗಳು ಸಕಲೇಶಪುರ ಮಾರ್ಗವಾಗಿ ಶಿರಾಡಿ ಘಾಟಿ ಮೂಲಕ ಸಂಚರಿಸುತ್ತಿದ್ದ ದೃಶ್ಯ ಕಂಡು ಬಂತು. ಚಾರ್ಮಾಡಿ ಘಾಟಿ ಬಂದ್ ಆಗಿಲ್ಲ ಎಂಬ ಮಾಹಿತಿ ಬಂದ ಬಳಿಕ, ಸಂಜೆ ವೇಳೆಗೆ ಸಂಚಾರ ಸುಗಮಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.