ಕೊಟ್ಟಿಗೆಹಾರ: ಮಂಗಳವಾರ ಸಂಜೆ ಬಣಕಲ್, ಕೊಟ್ಟಿಗೆಹಾರ, ಬಾಳೂರು ಸೇರಿದಂತೆ ಸುತ್ತಮುತ್ತ ಧಾರಾಕಾರ ಮಳೆಯಾಯಿತು.
ಸೋಮವಾರದಿಂದ ಗುಡುಗು ಸೇರಿದಂತೆ ಆಲಿಕಲ್ಲು ಮಳೆಯಾಗಿದ್ದು ಮಂಗಳವಾರವೂ ಕೊಟ್ಟಿಗೆಹಾರ ಸುತ್ತಮುತ್ತ ಅರ್ಧ ಮಳೆಯ ನೀರು ರಸ್ತೆಯಲ್ಲಿ ಹರಿಯುವ ದೃಶ್ಯ ಕಂಡು ಬಂತು. ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯು ಕಾಫಿ, ಕಾಳು ಮೆಣಸು, ಶುಂಠಿ ಸೇರಿದಂತೆ ವಿವಿಧ ಬೆಳೆಗಳಿಗೆ ಅನುಕೂಲವಾಗಿದೆ. ರೈತರಿಗೆ ಈ ಮಳೆಯಿಂದ ತೋಟಗಳಿಗೆ ಸ್ಪ್ರಿಂಕ್ಲರ್ ಮಾಡುವ ಖರ್ಚು ಉಳಿತಾಯವಾಗಿದೆ. ಕಾಫಿನಾಡಿನಲ್ಲಿ ಸೆಕೆಯ ಪ್ರಮಾಣವೂ ಇತ್ತೀಚೆಗೆ ಹೆಚ್ಚಿದ್ದು, ಮಳೆಯಿಂದ ಭೂಮಿಗೆ ತಂಪು ಎರೆದಂತಾಗಿದೆ.
ಮಳೆಗೆ ತಂಪಾದ ಇಳೆ
ಶೃಂಗೇರಿ: ತಾಲ್ಲೂಕಿನಾದ್ಯಂತ ಮಂಗಳವಾರ ಸಂಜೆ ಒಂದು ಗಂಟೆ ಕಾಲ ಗುಡುಗಿನೊಂದಿಗೆ ಮಳೆ ಸುರಿದಿದೆ. ತಾಲ್ಲೂಕಿನ ಕುಂಚೇಬೈಲ್, ಮೆಣಸೆ, ಮಸಿಗೆ, ಸಸಿಮನೆ, ಹಾಲಂದೂರು, ಶೃಂಗೇರಿ ಪಟ್ಟಣ, ತೆಕ್ಕೂರು, ಬೆಟ್ಟಗೆರೆ, ವೈಕುಂಠಪುರ, ನೆಮ್ಮಾರು, ಧರೆಕೊಪ್ಪ, ತ್ಯಾವಣ, ಹೊನ್ನವಳ್ಳಿ, ಬೇಗಾರು ಮೊದಲಾದ ಕಡೆ ಉತ್ತಮ ಮಳೆಯಾಗಿದೆ.
ಮಳೆಯಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ.
ಬಿರು ಬಿಸಿಲಿನ ತಾಪಕ್ಕೆ ಕಾದಿದ್ದ ಭೂಮಿಗೆ ನಿತ್ಯವೂ ಸುರಿಯುತ್ತಿರುವ ಮಳೆ ಕೊಂಚ ತಂಪು ನೀಡಿದೆ. ಮಳೆಯಿಂದಾಗಿ ಕೃಷಿ ಕಾರ್ಯಕ್ಕೆ, ಅಡಿಕೆ, ಕಾಳುಮೆಣಸು, ಕಾಫಿ ತೋಟಗಳಿಗೆ ಅನುಕೂಲವಾಗಿದೆ. ತಾಲ್ಲೂಕಿನಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆಯಿಂದಾಗಿ ಕೃಷಿಗೆ ನೀರು ಹಾಯಿಸುವ ಪಂಪ್ ಚಾಲನೆ ಮಾಡಲು ಪ್ರಯಾಸಪಡಬೇಕಾಗಿತ್ತು. ಮಳೆಯಾಗಿರುವುದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.