ಚಿಕ್ಕಮಗಳೂರು: ಮಳೆ ಆವಾಂತರಕ್ಕೆ ನಲುಗಿರುವ ಮಲೆನಾಡು ಭಾಗದಲ್ಲಿ ಪರಿಹಾರ ಕಾರ್ಯಗಳು ಆರಂಭವಾಗಿವೆ. ಮನೆ, ತೋಟ, ಗದ್ದೆ, ಬೆಳೆ ಕೊಚ್ಚಿ ಹೋಗಿದ್ದರಿಂದ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಆಲೆಖಾನ್ ಹೊರಟ್ಟಿ, ಮಧುಗಂಡಿ, ಮಲೆಮನೆ ದುರ್ಗದ ಹಳ್ಳಿಗಳಿಗೆ ವಾಪಸ್ ಹೋಗದ ಸ್ಥಿತಿ ಇದೆ.
ಗುಡ್ಡ ಕುಸಿದು ಗ್ರಾಮಗಳ ರಸ್ತೆ ಕಡಿತವಾಗಿದೆ, ಮನೆಗಳು ಹಾನಿ ಯಾಗಿವೆ. ಈ ಗ್ರಾಮಗಳ ಕೆಲ ಕುಟುಂಬ ಗಳು ಪರಿಹಾರ ಕೇಂದ್ರಗಳಲ್ಲಿ, ಕೆಲ ಕುಟುಂಬಗಳು ಸ್ನೇಹಿತರು, ಸಂಬಂಧಿ ಕರ ಮನೆಗಳಲ್ಲಿ ಆಶ್ರಯ ಪಡೆದಿವೆ.
ಮೂಡಿಗೆರೆ, ಎನ್.ಆರ್.ಪುರ, ಚಿಕ್ಕಮಗಳೂರು ತಾಲ್ಲೂಕುಗಳ 26 ಪರಿಹಾರ ಕೇಂದ್ರಗಳಲ್ಲಿ 1,631 ಮಂದಿ ಆಶ್ರಯ ಪಡೆದಿದ್ದಾರೆ. ಈಗ ಮಳೆ ಕ್ಷೀಣಿಸಿದ್ದು, ಪರಿಹಾರ ಕೇಂದ್ರಗಳಲ್ಲಿ ಇರುವ ಕೆಲವರು ಊರಿಗೆ ಹೋಗಿ ಮನೆ ಸ್ಥಿತಿ ಪರಿಶೀಲಿಸಿ ಹಿಂತಿರುಗಿದ್ದಾರೆ.
‘ಮನೆ ಬಹಳಷ್ಟು ಕುಸಿದಿದೆ, ವಾಸಿಸಲು ಸಾಧ್ಯವಿಲ್ಲ. ಮನೆಯಲ್ಲಿದ್ದ ವಸ್ತುಗಳೆಲ್ಲ ಕೊಚ್ಚಿ ಹೋಗಿವೆ. ನೆಲಸಮ ಗೊಳಿಸಿ ಹೊಸದು ಕಟ್ಟಿಸುವುದೇ ಈಗಿರುವ ದಾರಿ. ತೋಟವೂ ಕೊಚ್ಚಿ ಹೋಗಿದೆ. ಸದ್ಯಕ್ಕೆ ಪರಿಹಾರ ಕೇಂದ್ರವೇ ಗತಿ’ ಎಂದು ಬಾಳೆಹೊನ್ನೂರು ಭಾಗದ ಉಮೇಶ್ ಅಳಲು ತೋಡಿಕೊಂಡರು.
ಮೂಡಿಗೆರೆ, ಬಾಳೆಹೊನ್ನೂರು, ಶೃಂಗೇರಿ, ಎನ್.ಆರ್.ಪುರ ಭಾಗದಲ್ಲಿ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.
ಗುಡ್ಡದಮಣ್ಣು ರಸ್ತೆಗೆ ಅಡ್ಡಲಾಗಿ ಕುಸಿದಿರುವ ಕಡೆಗಳಲ್ಲಿ ತೆರವು ಕಾರ್ಯ ಸಾಗಿದೆ. ಧರೆ ಮತ್ತು ಸೇತುವೆಗಳು ಕುಸಿದಿರುವೆಡೆ ಕಾಮಗಾರಿ ಶುರು ವಾಗಿಲ್ಲ. ಚಾರ್ಮಾಡಿ ಘಾಟಿ ಭಾಗದ ಕೆಲವೆಡೆ ಮತ್ತೆ ಗುಡ್ಡದಮಣ್ಣು
ಕುಸಿದಿದೆ.
₹ 260 ಕೋಟಿ ಆಸ್ತಿಪಾಸ್ತಿ ಹಾನಿ ಯಾಗಿದೆ ಎಂದು ಪ್ರಾಥಮಿಕ ಹಂತದಲ್ಲಿ ಜಿಲ್ಲಾಡಳಿತ ನಷ್ಟ ಅಂದಾಜು ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.