ಬಾಳೆಹೊನ್ನೂರು: ರಾಜ್ಯದ ಅರಣ್ಯ ಆಧಾರಿತ ಆದಿವಾಸಿಗಳಿಗೆ 1936ರಲ್ಲೇ ಶೇ 3ರಷ್ಟು ಮೀಸಲಾತಿ ನಿಗದಿಪಡಿಸಿ ಸಂವಿಧಾನ ಬದ್ಧವಾದ ಹಕ್ಕನ್ನು ಸ್ವಾತಂತ್ರ್ಯ ಪೂರ್ವದಲ್ಲಿ ನೀಡಲಾಗಿತ್ತು. ಅದರ ನಂತರ 1976ರಲ್ಲಿ ಹಾವನೂರು ವರದಿಯನ್ವಯ 49 ಬುಡಕಟ್ಟು ಸಮುದಾಯಗಳನ್ನು ಮೀಸಲಾತಿಗೆ ಸೇರ್ಪಡೆ ಮಾಡಿರುವುದರಿಂದ ಮೂಲ ಆದಿವಾಸಿಗಳ ಮೀಸಲಾತಿಗೆ ಸಂಚಕಾರ ಬಂದಿದೆ ಎಂದು ರಾಜ್ಯ ಮೂಲ ಆದಿವಾಸಿ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎನ್. ವಿಠ್ಠಲ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ 40 ತಾಲ್ಲೂಕುಗಳಲ್ಲಿ 70 ಸಾವಿರ ಕುಟುಂಬಗಳು ಇದ್ದು, 8ರಿಂದ 10 ಲಕ್ಷ ಜನ ಮೂಲ ಆದಿವಾಸಿಗಳಿದ್ದಾರೆ. ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದಾದಲ್ಲಿ ಅರಣ್ಯವನ್ನು ನಮ್ಮ ವಶಕ್ಕೆ ನೀಡಿ. ನಮ್ಮ ಅಭಿವೃದ್ಧಿಯನ್ನು ನಾವೇ ಮಾಡಿಕೊಳ್ಳುತ್ತೇವೆ’ ಎಂದರು.
ರಾಷ್ಟ್ರೀಯ ಆದಿವಾಸಿ ಆಂದೋಲನದ ಸದಸ್ಯೆ ಎಚ್.ಎನ್ ಜ್ಯೋತಿ ಮಾತನಾಡಿ, ‘₹ 200 ಕೋಟಿ ಖರ್ಚು ಮಾಡಿ, ವೈಜ್ಞಾನಿಕವಾಗಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ಸರ್ಕಾರ ಅದನ್ನು ಪರಿಗಣಿಸದಿರುವುದು ದುರಂತ’ ಎಂದರು.
ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಬಿಡುಗಡೆ ಮಾಡಿದರು. ಜಿಲ್ಲಾ ಸಂಚಾಲಕ ಎಚ್.ಎ ಕೃಷ್ಣರಾಜ್, ನರಸಿಂಹರಾಜಪುರ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಚಿಕ್ಕಮಗಳೂರು ತಾಲ್ಲೂಕು ಘಟಕದ ಸುರೇಶ್ ಕುಮಾರ್, ಕೊಪ್ಪದ ಕರಿಯಪ್ಪ, ಚಿಕ್ಕಮಗಳೂರಿನ ಚಿದಾ
ನಂದ, ಶೃಂಗೇರಿ ತಾಲ್ಲೂಕು ಉಪಾಧ್ಯಕ್ಷೆ ಕುಸುಮಾ, ಮುಖಂಡರಾದ ನೀಲಯ್ಯ, ಮಂಜುನಾಥ್, ಸುಂದರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.