ADVERTISEMENT

ಕಳಸ | ನಿರ್ವಹಣೆ ಕೊರತೆ: ಹೆದ್ದಾರಿಯಲ್ಲಿ ಹರಿವ ಮಳೆ ನೀರು...

ಕೋಟಿಗಟ್ಟಲೆ ಮೊತ್ತ ನಿರ್ವಹಣೆ ಇಲ್ಲದೆ ಪೋಲು: ಸಾರ್ವಜನಿಕರ ದೂರು

ರವಿ ಕೆಳಂಗಡಿ
Published 2 ಜುಲೈ 2025, 6:47 IST
Last Updated 2 ಜುಲೈ 2025, 6:47 IST
ಕಳಸ-ಬಾಳೆಹೊನ್ನೂರು ರಸ್ತೆಯ ನೆಲ್ಲಿಕೆರೆ ಬಳಿ ಡಾಂಬರು ರಸ್ತೆಯ ಮೇಲೆ ಮಳೆನೀರು ಹರಿಯುತ್ತಿರುವುದು
ಕಳಸ-ಬಾಳೆಹೊನ್ನೂರು ರಸ್ತೆಯ ನೆಲ್ಲಿಕೆರೆ ಬಳಿ ಡಾಂಬರು ರಸ್ತೆಯ ಮೇಲೆ ಮಳೆನೀರು ಹರಿಯುತ್ತಿರುವುದು   

ಕಳಸ: ತಾಲ್ಲೂಕಿನಲ್ಲಿರುವ ಮೂರು ಹೆದ್ದಾರಿಗಳ ನಿರ್ವಹಣೆಯಲ್ಲಿ ಲೋಕೋಪಯೋಗಿ ಇಲಾಖೆ ಸೋತಿದ್ದು, ರಸ್ತೆಗಳು ಮಳೆ ಹೊಡೆತಕ್ಕೆ ಸಿಲುಕಿ ನಲುಗುತ್ತಿವೆ.

ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್, ಕೊಟ್ಟಿಗೆಹಾರ-ಕಳಸ-ಹೊರನಾಡು, ಕಳಸ-ಬಾಳೆಹೊಳೆ-ಮಾಗುಂಡಿ ಹೆದ್ದಾರಿಗಳ ಮೇಲೆ ಕಳೆದ ಒಂದು ತಿಂಗಳಿಂದ ಮಳೆನೀರು ಹರಿಯುತ್ತಿದೆ. ರಸ್ತೆ ಪಕ್ಕದ ಚರಂಡಿ ಮುಚ್ಚಿದ್ದು, ಅದನ್ನು ತೆರೆಯುವ ಪ್ರಯತ್ನ ನಡೆದಿಲ್ಲ. ಮೊದಲೇ ಅಂದಗೆಟ್ಟಿರುವ ಈ ಹೆದ್ದಾರಿಗಳ ಸ್ಥಿತಿ ಈಗ ಇನ್ನಷ್ಟು ಹೀನಾಯ ಸ್ಥಿತಿಗೆ ತಲುಪುತ್ತಿವೆ.

ಹೆದ್ದಾರಿಗಳನ್ನು ನಿರ್ವಹಣೆ ಮಾಡಬೇಕಾದ ಲೋಕೋಪಯೋಗಿ ಇಲಾಖೆಯ ಆಮೆವೇಗದ ಕೆಲಸದಿಂದ ರಸ್ತೆಗಳಿಗೆ ಇನ್ನಷ್ಟು ಹಾನಿ ಆಗುವ ಸಾಧ್ಯತೆ ನಿಚ್ಚಳವಾಗಿದೆ. ಮಳೆ ಹೆಚ್ಚಾಗಿರುವುದರಿಂದ ರಸ್ತೆಗಳು ಹಾನಿಗೀಡಾಗುತ್ತಿವೆ ಎಂದು ಇಲಾಖೆ ಸಬೂಬು ಹೇಳುತ್ತದೆ. ಆದರೆ, ವರ್ಷಕ್ಕೆ 300 ಇಂಚು ಮಳೆ ಬೀಳುತ್ತಿದ್ದ ಕುದುರೆಮುಖ ಉದ್ಯಾನ ವ್ಯಾಪ್ತಿಯಲ್ಲಿ ಕುದುರೆಮುಖ ಕಂಪನಿ ರಸ್ತೆ ನಿರ್ವಹಣೆ ಮಾಡುತ್ತಿದ್ದಾಗ ಅತ್ಯಂತ ಗುಣಮಟ್ಟದ ರಸ್ತೆ ಇತ್ತು. ಲೋಕೋಪಯೋಗಿ ಇಲಾಖೆ ನಿರ್ವಹಣೆ ಆರಂಭಿಸಿದ ಮೇಲೆ ರಸ್ತೆಯಲ್ಲಿ ಗುಂಡಿಗಳು ಮೂಡಿದೆ ಎಂದು ಕಳಸದ ಯುವ ಉದ್ಯಮಿ ಚಂದ್ರಮೋಹನ್ ಹೇಳಿದರು.

ADVERTISEMENT

ರಾಜ್ಯ ಹೆದ್ದಾರಿ ಮೇಲೆ ನೀರು ಹರಿಯುತ್ತಿದ್ದರೂ ಯಾಕೆ ನಿರ್ವಹಣೆ ಆರಂಭಿಸಿಲ್ಲ ಎಂದು ಲೋಕೋಪಯೋಗಿ ಕಿರಿಯ ಎಂಜಿನಿಯರ್ ಚೆನ್ನಯ್ಯ ಅವರನ್ನು ಪ್ರಶ್ನಿಸಿದಾಗ ಅವರು, ‘ರಸ್ತೆ ನಿರ್ವಹಣೆಯ ಕೆಲಸವನ್ನು ಮತ್ತೆ ಆರಂಭಿಸಲಾಗುತ್ತದೆ. ಕಳೆದ ನವೆಂಬರ್ ತಿಂಗಳಿಂದ ನಡೆದಿದ್ದ ನಿರ್ವಹಣೆ ಗುತ್ತಿಗೆ ಮೇ ತಿಂಗಳಿಗೆ ಮುಗಿದಿದೆ’ ಎಂದರು.

ಹೆದ್ದಾರಿಗಳಿಗೆ ಸುರಿಯುವ ಕೋಟಿಗಟ್ಟಲೆ ಮೊತ್ತ ನಿರ್ವಹಣೆ ಇಲ್ಲದೆ ಪೋಲು ಆಗುತ್ತಿದೆ. ಪಕ್ಕದ ತಾಲ್ಲೂಕುಗಳಲ್ಲಿ ರಸ್ತೆ ನಿರ್ವಹಣೆ ಎಷ್ಟು ಅಚ್ಚುಕಟ್ಟಾಗಿ ಮಾಡುತ್ತಾರೆ. ಆದರೆ, ನಮ್ಮ ಊರಿನಲ್ಲಿ ಯಾಕೆ ಇಷ್ಟು ನಿರ್ಲಕ್ಷ್ಯ ಎಂದು ಕಳಸದ ಯೋಗೀಶ್ ಭಟ್ ಬೇಸರದಿಂದ ಪ್ರಶ್ನಿಸುತ್ತಾರೆ.

ಕಳಸ-ಕೊಟ್ಟಿಗೆಹಾರ ರಾಜ್ಯ ಹೆದ್ದಾರಿಯ ಕಳಸೇಶ್ವರ ದೇವಸ್ಥಾನದ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.