ADVERTISEMENT

ವಿಶ್ವಸಂಸ್ಥೆ ಸೇವೆಗೆ ತರೀಕೆರೆಯ ಸಂಜನಾ

ಅಂತರರಾಷ್ಟ್ರೀಯ ನಾಗರಿಕ ಸೇವೆಗೆ ಸಾಫ್ಟ್‌ವೇರ್‌ ಎಂಜಿನಿಯರ್‌

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 19:18 IST
Last Updated 18 ಆಗಸ್ಟ್ 2020, 19:18 IST
ತರೀಕೆರೆ ಪಟ್ಟಣದಲ್ಲಿ ಸಂಜನಾ ಮಹಳತ್ಕರ್ ಗೆ ಸಿಹಿ ತಿನ್ನಿಸುತ್ತಿರುವ ಪೋಷಕರು ಹಾಗೂ ಸಹೋದರ
ತರೀಕೆರೆ ಪಟ್ಟಣದಲ್ಲಿ ಸಂಜನಾ ಮಹಳತ್ಕರ್ ಗೆ ಸಿಹಿ ತಿನ್ನಿಸುತ್ತಿರುವ ಪೋಷಕರು ಹಾಗೂ ಸಹೋದರ   

ತರೀಕೆರೆ: ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ನಾಗರಿಕ ಸೇವೆ ಪರೀಕ್ಷೆಯಲ್ಲಿ ತರೀಕೆರೆ ಪಟ್ಟಣದ ಸಂಜನಾ ಮಹಳತ್ಕರ್ ಉತ್ತೀರ್ಣರಾಗಿದ್ದು, ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯಲ್ಲಿ ಹಿರಿಯ ಎಂಜಿನಿಯರ್‌ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಸಂಜನಾ ಮಹಳತ್ಕರ್, ಪಟ್ಟಣದ ಜವಳಿ ವ್ಯಾಪಾರಿ ಜಗನ್ನಾಥ್ ರಾವ್ ಮತ್ತು ಸವಿತಾ ದಂಪತಿ ಪುತ್ರಿ. ಸಂಜನಾ ಪ್ರೌಢ ಶಿಕ್ಷಣ ಮತ್ತು ಪಿಯುಸಿ ವ್ಯಾಸಂಗ ಮಾಡಿದ್ದು ಪಟ್ಟಣದ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ. ನಂತರ ಅವರು ಶಿವಮೊಗ್ಗದ ಜವಾಹರಲಾಲ್‌ ನೆಹರೂ ನ್ಯಾಷನಲ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯೂನಿಕೇಷನ್ ವಿಷಯದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದುಕೊಂಡಿದ್ದಾರೆ. ಬಳಿಕ ಹೈದರಾಬಾದ್‌ನಲ್ಲಿರುವ ಟಾಟಾ ಕನ್ಸಲ್ಟ್‌ಟೆಂಟ್‌ ಸರ್ವಿಸ್‌ನಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು.

ನಾಗರಿಕ ಸೇವೆ ಪರೀಕ್ಷೆ ಎದುರಿಸುವುದು ತಂದೆ ಜಗನ್ನಾಥ್‌ ಅವರಿಗೆ ಇಷ್ಟವಿರಲಿಲ್ಲ. ಮಗಳು ಇರುವ ಉದ್ಯೋಗದಲ್ಲಿಯೇ ಇರಲಿ ಎಂಬುದು ಅವರು ಆಸೆ ಆಗಿತ್ತು. ಆದರೆ, ಸಂಜನಾ ಕೆಲಸದ ನಡುವೆಯೇ ‘ಇಂಟರ್ ನ್ಯಾಷನಲ್ ಸಿವಿಲ್ ಸರ್ವಿಸ್’ ಪರೀಕ್ಷೆ ಎದುರಿಸಿ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸಲು ಆಯ್ಕೆ ಆಗಿದ್ದಾರೆ.

ADVERTISEMENT

ಲಾಕ್‌ಡೌನ್ ವೇಳೆಯಲ್ಲಿ ಆನ್‌ಲೈನ್‌ನಲ್ಲಿಯೇ 18 ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿ ಅವರು ಯಶಸ್ವಿಯಾಗಿದ್ದಾರೆ.

ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ವಿಶ್ವಸಂಸ್ಥೆಯ ‘ಇಂಟರ್ ‌ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ’ ಕಚೇರಿಯಲ್ಲಿ ಹಿರಿಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸಲು ಸೆಪ್ಟೆಂಬರ್‌ ತಿಂಗಳಾಂತ್ಯಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

‘ಕನಸು ಕಾಣಬೇಕು, ಕನಸು ಒಂದು ದಿನ ನನಸಾಗುತ್ತದೆ. ಅದಕ್ಕಾಗಿ ಶ್ರಮ ಹಾಗೂ ಸಂಯಮ ಬಹಳ ಮುಖ್ಯ’ ಎಂದು ಸಂಜನಾ ಹೇಳಿದರು.

‘ಮಗಳ ಸಾಧನೆ ಕಂಡು ಹೆಮ್ಮೆಯಾಗುತ್ತಿದೆ’ ಎಂದು ಸಂಜನಾ ಪೋಷಕರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.