ADVERTISEMENT

ಅಂಗವಿಕಲ ಮಕ್ಕಳ ಸೇವೆ, ದೇವರ ಸೇವೆಯಿದ್ದಂತೆ: ದೀಪಕ್‌ ದೊಡ್ಡಯ್ಯ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:12 IST
Last Updated 28 ಡಿಸೆಂಬರ್ 2025, 5:12 IST
ನಗರದ ಆಶಾಕಿರಣ ಅಂಧ ಮಕ್ಕಳ ಪಾಠಶಾಲೆಯಲ್ಲಿ ಶನಿವಾರ ಅಂಗವಿಕಲ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಉದ್ಘಾಟನೆ ನಡೆಯಿತು
ನಗರದ ಆಶಾಕಿರಣ ಅಂಧ ಮಕ್ಕಳ ಪಾಠಶಾಲೆಯಲ್ಲಿ ಶನಿವಾರ ಅಂಗವಿಕಲ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಉದ್ಘಾಟನೆ ನಡೆಯಿತು   

ಚಿಕ್ಕಮಗಳೂರು: ಅಂಗವಿಕಲ ಮಕ್ಕಳ ಸೇವೆ ಮಾಡಿದರೆ ದೇವರ ಸೇವೆ ಮಾಡಿದಷ್ಟೇ ಪುಣ್ಯ ಲಭಿಸಲಿದೆ. ಪ್ರಪಂಚದ ಅರಿವಿಲ್ಲದ ಮಕ್ಕಳಿಗೆ ವಸಡಿನ ಸಮಸ್ಯೆ ಕಂಡುಬಂದಲ್ಲಿ ಪರಿಹರಿಸಲು ಸದಾಕಾಲ ಜತೆಗಿರುತ್ತೇವೆ ಎಂದು ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್‌ ದೊಡ್ಡಯ್ಯ ಹೇಳಿದರು.

ನಗರದ ಆಶಾಕಿರಣ ಅಂಧಮಕ್ಕಳ ಪಾಠಶಾಲೆಯಲ್ಲಿ ಯುರೇಕಾ ಅಕಾಡೆಮಿ ಮತ್ತು ಆಶ್ರಯ ಫೌಂಡೇಷನ್ ವತಿಯಿಂದ ಶನಿವಾರ ಆಯೋಜಿಸಿದ್ದ ಅಂಗವಿಕಲ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನಾದ್ಯಂತ ಅನೇಕ ಮಕ್ಕಳು ಅಂಗಾಂಗಗಳು ಬಲಿಷ್ಠವಾಗಿದ್ದರೂ ಜೀವನದ ಸಾಧನೆಯಲ್ಲಿ ಹಿನ್ನೆಡೆ ಅನುಭವಿಸಿದೆ. ಆದರೆ ಆಶಾಕಿರಣ ಮಕ್ಕಳು ಅಂಗಾಂಗಳ ವೈಫಲ್ಯತೆ ನಡುವೆಯು ವಿಶಿಷ್ಟ ಶಕ್ತಿಯಿಂದಲೇ ದೇಶ-ವಿದೇಶಗಳಲ್ಲಿ ಮನ್ನಣೆಗಳಿಸುವಂಥ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ADVERTISEMENT

ಒಲಂಪಿಕ್ಸ್‌ನಲ್ಲಿ ಆಶಾಕಿರಣ ಶಾಲೆಯ ರಕ್ಷಿತಾರಾಜು ಹಾಗೂ ಶವಾಜ್ ಎಂಬುವವರಿಗೆ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅವಕಾಶ ಲಭಿಸಿದೆ. ವಿಶೇಷವಾಗಿ ಈ ಸಾಧನೆಯಲ್ಲಿ ಆಶಾಕಿರಣ ಪಾಠಶಾಲೆ ಮಕ್ಕಳ ಕೊಡುಗೆ ಬಹಳಷ್ಟಿದೆ. ಹಾಗಾಗಿ ಜಿಲ್ಲೆಯ ಆಶಾಕಿರಣ ಶಾಲೆಯು ಭವ್ಯ ಮಂದಿರ ಎಂದು ತಿಳಿಸಿದರು.

ಮಕ್ಕಳು ಸೇರಿದಂತೆ ದೊಡ್ಡವರಿಗೆ ಹಲ್ಲಿನ ಕಾಳಜಿ ಅತಿಮುಖ್ಯ. ಜೀವನಕ್ಕೆ ಆಹಾರ ಮುಖ್ಯ, ಆಹಾರ ಚೆನ್ನಾಗಿ ಜಗಿಯಲು ಹಲ್ಲುಗಳು ಬಲಿಷ್ಠವಾಗಿರಬೇಕು. ಆಹಾರ ಜೀರ್ಣ ಕ್ರಿಯೆ ಆರೋಗ್ಯದಿಂದ ಕೂಡಿರಲು ಮನುಷ್ಯನಿಗೆ ಹಲ್ಲು ಕಾರ್ಯ ಬಹಳಷ್ಟಿದೆ. ಹೀಗಾಗಿ ಹಲ್ಲಿನ ಸಮಸ್ಯೆಗಳಿದ್ದಲ್ಲಿ ಶೀಘ್ರವೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

ವಿಶೇಷವಾಗಿ ಅಂಗವಿಕಲ ಮಕ್ಕಳ ದೇವಾಲಯದಲ್ಲಿ ತಜ್ಞ ವೈದ್ಯರನ್ನು ಕರೆಸಿ ಉಚಿತವಾಗಿ ಮಕ್ಕಳ ಹಲ್ಲಿನ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗಿದೆ. ಮಕ್ಕಳಿಗೆ ಹಲ್ಲುಗಳ ಆರೋಗ್ಯಕ್ಕಾಗಿ ಪೇಸ್ಟ್, ಬ್ರಶ್ ಸೇರಿದಂತೆ ಸಲಕರಣೆಗಳನ್ನು ಎಲ್ಲಾ ಮಕ್ಕಳಿಗೆ ವಿತರಿಸಲಾಗಿದೆ ಎಂದರು.

ಖ್ಯಾತ ಮಕ್ಕಳ ತಜ್ಞ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಮಾನವನ ಶರೀರಿದಲ್ಲಿ ಅನೇಕ ಮೂಳೆಗಳಿವೆ. ಇದರಲ್ಲಿ ಅತ್ಯಂತ ಶಕ್ತಿಯುತ ಹಲ್ಲು ಮೂಳೆ. ಇದಕ್ಕಿಂತ ಗಟ್ಟಿಯಾದ ಮೂಳೆ ದೇಹದಲ್ಲಿಲ್ಲ. ಮಕ್ಕಳು ಹಲ್ಲಿನ ಸುರಕ್ಷತೆ ಕಾಪಾಡಲು ವೈದ್ಯರ ಸಲಹೆಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಲಿನ್ಸ್ ಇವೆಂಟ್ಸ್ ಉಪಾಧ್ಯಕ್ಷೆ ಪ್ರಿಯಾಂಕ ಭರತ್ ಮಾತನಾಡಿ, ಹಲ್ಲುಗಳು ಸೌಂದರ್ಯ ಮತ್ತು ಆರೋಗ್ಯದ ಪ್ರತೀಕ. ಹೀಗಾಗಿ ಹಲ್ಲುಗಳನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು. ಎಲ್ಲಾ ಮಕ್ಕಳು ಈ ಉಚಿತ ದಂತ ಚಿಕಿತ್ಸಾ ಶಿಬಿರದ ಪ್ರಯೋಜನ ಸಂಪೂರ್ಣವಾಗಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ದಂತ ಚಿಕಿತ್ಸಾ ಶಿಬಿರದಲ್ಲಿ ಸುಮಾರು 50 ಮಕ್ಕಳು ತಪಾಸಣೆಗೆ ಒಳಗಾದರು. ಕಾರ್ಯಕ್ರಮದಲ್ಲಿ ಡಾ.ಭೂಮಿಕಾ ಶೇಖರ್, ಆಶ್ರಯ ಫೌಂಡೇಷನ್ ಅಧ್ಯಕ್ಷೆ ಡಾ. ವರ್ಷ, ಜಿಲ್ಲಾ ಆರೋಗ್ಯ ಇಲಾಖೆ ವ್ಯವಸ್ಥಾಪಕ ವಿ.ವಿನಯ್, ರಂಗನಿರ್ದೇಶಕಿ  ಪ್ರತಿಭಾ ನಂದಕುಮಾರ್, ಪ್ರಭಾರ ಮುಖ್ಯಶಿಕ್ಷಕ ಲಕ್ಷ್ಮೇಗೌಡ, ಕಸಾಪ ತಾಲ್ಲೂಕು ಅಧ್ಯಕ್ಷ ದಯಾನಂದ್, ನಗರಾಧ್ಯಕ್ಷ ಸಚಿನ್‌ಸಿಂಗ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.