ADVERTISEMENT

ಶೃಂಗೇರಿ: ಶಾರದಾಂಬೆಗೆ ಹಂಸವಾಹನ ಅಲಂಕಾರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 5:16 IST
Last Updated 23 ಸೆಪ್ಟೆಂಬರ್ 2025, 5:16 IST
ಶೃಂಗೇರಿ ಶಾರದ ಮಠದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಸೋಮವಾರ ದೇವಿಗೆ ಹಂಸವಾಹನ ಅಲಂಕಾರ ಮಾಡಲಾಗಿತ್ತು
ಶೃಂಗೇರಿ ಶಾರದ ಮಠದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಸೋಮವಾರ ದೇವಿಗೆ ಹಂಸವಾಹನ ಅಲಂಕಾರ ಮಾಡಲಾಗಿತ್ತು   

ಶೃಂಗೇರಿ: ಶಾರದಾ ಮಠದಲ್ಲಿ ನವರಾತ್ರಿ ಪ್ರಯುಕ್ತ ಶಾರದೆ ಪ್ರತಿಷ್ಠೆಯನ್ನು ಪೀಠದ ಹಿರಿಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಸೋಮವಾರ ನೆರವೇರಿಸಿದರು.

ಧಾರ್ಮಿಕ ವಿಧಿಯ ಬಳಿಕ ಶಾರದಾ ದೇವಿಗೆ ಕೈಯಲ್ಲಿ ಕಮಂಡಲು, ಅಕ್ಷರಮಾಲೆ, ಪುಸ್ತಕ, ಪಾಶ ಮತ್ತು ಚಿನ್ನದ ಮುದ್ರೆಗಳನ್ನು ಧರಿಸಿ, ಹಂಸವಾಹನ ಅಲಂಕಾರ ಮಾಡಿದರು. ಮಠದಲ್ಲಿ ಶ್ರೀಚಕ್ರ ನವಾಹರಣ ಪೂಜೆ, ಕುಮಾರಿ ಪೂಜೆ, ಸುವಾಸಿನಿ ಪೂಜೆ ನಡೆಯಿತು.  

ಶಾರದಾ ಮಠದಲ್ಲಿ ಸಂಜೆ ನಡೆದ ಬೀದಿ ಉತ್ಸವದಲ್ಲಿ ಶೃಂಗೇರಿ ತಾಲ್ಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರು ಬಲು ಉತ್ಸಾಹದಿಂದ ಭಾಗವಹಿಸಿದ್ದರು. ಕಾವಡಿ ಅಗ್ರಹಾರದ ಉಮಾಮಹೇಶ್ವರ ಸೇವಾ ಸಮಿತಿ, ಹೆಗ್ಗದ್ದೆ ಅನಂತಪದ್ಮನಾಭ ಸೇವಾ ಸಮಿತಿ, ನೇತ್ರವಳ್ಳಿ ದುರ್ಗಾ ಪರಮೇಶ್ವರಿ ಭಕ್ತ ಮಂಡಳಿ, ಉಳುವೇಬೈಲು ಜೈಶಂಕರ್ ಯುವಕ ಸಂಘ, ಅಡ್ಡಗದ್ದೆ ವಿನಾಯಕ ಯುವಕ ಸಂಘ, ಕೆಳಕೊಪ್ಪ ವಿನಾಯಕ ಸೇವಾ ಸಮಿತಿ, ಕೊಪ್ಪ ಶ್ರೀನಿಕೇತನ ಭಜನಾ ಮಂಡಳಿ, ಹಿಂದೂ ಜಾಗರಣ ವೇದಿಕೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘಗಳ ಒಕ್ಕೂಟ, ಪ್ರಕೃತಿ ರೈತ ಮಿತ್ರಕೂಟ, ವಿವಿಧ ಸಂಘ-ಸಂಸ್ಥೆಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು  ಪಾಲ್ಗೊಂಡರು.

ADVERTISEMENT

ಮಠದ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಸಂಜೆ ಬೆಂಗಳೂರಿನ ಶಿವಪ್ರಿಯಾ ರಾಮಸ್ವಾಮಿ ತಂಡದವರಿಂದ ನಾಮ ಸಂಕೀರ್ತನೆ ಕಾರ್ಯಕ್ರಮ ನಡೆಯಿತು.

ಶಾರದಾ ಮಠದ ವಿಧುಶೇಖರಭಾರತೀ ಸ್ವಾಮೀಜಿಯವರು ಶಾರದ ಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರೀಟ, ಆಭರಣ ಧರಿಸಿ ಉತ್ಸವದ ಸಿಂಹಾಸನದಲ್ಲಿ ಆಸೀನರಾದರು. ಸಿಂಹಾಸನದಲ್ಲಿರುವ ದೇವಿಯ ಉತ್ಸವ ಮೂರ್ತಿಯನ್ನು ಬಂಗಾರದ ರಥದಲ್ಲಿ ಇಡಲಾಯಿತು. ವೇದ, ವಾದ್ಯ ಫೋಷಗಳೊಂದಿಗೆ, ಛತ್ರಿ-ಛಾಮರಗಳೊಂದಿಗೆ ಶಾರದಾ ದೇವಸ್ಥಾನದ ಒಳಪ್ರಾಂಗಣದಲ್ಲಿ ದೇವಾಲಯಕ್ಕೆ ಮೂರು ಸುತ್ತು ಉತ್ಸವ ನೆರವೇರಿತು.

ಸಪ್ತಶತಿ ಪಾರಾಯಣದ ಅಧ್ಯಯನ, ಅಮ್ಮನವರಿಗೆ ಮಂಗಳಾರತಿ, ನಾಲ್ಕು ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸಂಗೀತ ಸೇವೆ ನೆರವೇರಿತು. ಪ್ರಸಾದ ವಿನಿಯೋಗದ ಬಳಿಕ ದರ್ಬಾರು ಮುಕ್ತಾಯಗೊಂಡಿತು.

ಶಾರದಾ ಮಠದಲ್ಲಿ ನವರಾತ್ರಿ ಪ್ರಯುಕ್ತ ಶಾರದೆ ಪ್ರತಿಷ್ಠೆಯನ್ನು ಭಾರತೀತೀರ್ಥ ಸ್ವಾಮೀಜಿ ಸೋಮವಾರ ನೇರವೆರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.