ಚಿಕ್ಕಮಗಳೂರು: ‘ಕಾಂಗ್ರೆಸ್ನಲ್ಲಿ ಪ್ರತಿಪಕ್ಷ ನಾಯಕ ಮತ್ತು ರಾಜ್ಯ ಘಟಕದ ಅಧ್ಯಕ್ಷ ಯಾರಾಗಬೇಕು ಎಂಬುದು ಇನ್ನು ನಿರ್ಧಾರವಾಗದಿರುವುದಕ್ಕೆ ಸಿದ್ದರಾಮಯ್ಯ ಅವರ ದುರಾಸೆ ಕಾರಣ’ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಛೇಡಿಸಿದರು.
ಅಜ್ಜಂಪುರ ತಾಲ್ಲೂಕಿನ ಕಲ್ಕೆರೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಧಿಕಾರ ಇರುವ ಕಡೆಗೆ ಹೋಗುವುದು ಸಿದ್ದರಾಮಯ್ಯ ಅವರ ಜಾಯಮಾನ. ಅಧಿಕಾರಕ್ಕಾಗಿಯೇ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಮುಖ್ಯಮಂತ್ರಿಯಾದರು. ಮೂಲ ಕಾಂಗ್ರೆಸ್ಸಿಗರನ್ನು ಸರಿಸಿ ಪಾರಮ್ಯ ಸಾಧಿಸಲು ಮುಂದಾಗಿದ್ದಾರೆ. ಅವರ ನಾಯಕತ್ವಕ್ಕೆ ಕಾಂಗ್ರೆಸ್ನಲ್ಲಿ ವಿರೋಧ ಇದೆ’ ಎಂದರು.
‘ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡ ಒಂದೇ ಪಕ್ಷದಲ್ಲಿ ಇದ್ದಾಗಲೂ ಎಂದೂ ಒಂದಾಗಿ ಕೆಲಸ ಮಾಡಿಲ್ಲ. ಪರಸ್ಪರ ಟೀಕೆ ಮಾಡಿಕೊಂಡಿದ್ದರು, ಸಿದ್ದರಾಮಯ್ಯ ಬಂಡಾಯ ಎದ್ದು ಹೊರಬಂದರು’ ಎಂದು ಕುಟುಕಿದರು.
‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಕಾರಣೀಭೂತರಾದವರಿಗೆ ಸಂಪುಟದಲ್ಲಿ ಅವಕಾಶ ನೀಡುವ ಕೆಲಸ ಈಗ ಮಾಡಿದ್ದೇವೆ. ಜೂನ್, ಜುಲೈನಲ್ಲಿ ಸಂಪುಟ ಪುನರ್ರಚಿಸಿ ಮೂಲ ಬಿಜೆಪಿಗರಿಗೆ ಅವಕಾಶ ಕಲ್ಪಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅಸಮಾಧಾನಗಳು ತಾತ್ಕಾಲಿಕ, ಶೀಘ್ರದಲ್ಲಿ ಶಮನವಾಗುತ್ತವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಖಾತೆಗೆ ಬೇಡಿಕೆ ಇಡುವುದು ಸಾಮಾನ್ಯ. ಮುಖ್ಯಮಂತ್ರಿಗೆ ಪರಮಾಧಿಕಾರ ಇದೆ. ಹಂಚಿಕೆಯಾದ ಮೇಲೆ ಅವರ ಕೆಲಸ ಮಾಡಿಕೊಂಡು ಹೊಗುತ್ತಾರೆ’ ಎಂದು ಉತ್ತರಿಸಿದರು.
‘ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ, ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಸಂಪುಟದಲ್ಲಿ ತೀರ್ಮಾನ ಕೈಗೊಂಡಿದ್ದೇವೆ. ಶೀಘ್ರದಲ್ಲಿ ಕಾರ್ಯಗತ ಮಾಡುತ್ತೇವೆ’ ಎಂದರು.
‘ಪ್ರಧಾನಿ ಮೋದಿ ವಿರುದ್ಧವಾಗಿ ವಿದ್ಯಾರ್ಥಿಗಳ ಮೂಲಕ ಟೀಕೆಟಿಪ್ಪಣಿ ವ್ಯಕ್ತ ಮಾಡಿಸುವುದು ಅಕ್ಷಮ್ಯ ಅಪರಾಧ. ಬೀದರ್ನ ಶಾಲೆಗೆ ಸಂಬಂಧಿಸಿದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.