ADVERTISEMENT

ಮೂಡಿಗೆರೆ | ಸೌಜನ್ಯ ಕೊಲೆ ಪ್ರಕರಣ: ನವೆಂಬರ್‌ 3ಕ್ಕೆ ಜನಾಗ್ರಹ ಸಭೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 13:43 IST
Last Updated 31 ಅಕ್ಟೋಬರ್ 2023, 13:43 IST
ಮೂಡಿಗೆರೆ ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು
ಮೂಡಿಗೆರೆ ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು   

ಮೂಡಿಗೆರೆ: ಸೌಜನ್ಯ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಮರು ತನಿಖೆ ನಡೆಸಬೇಕೆಂದು ಆಗ್ರಹಿಸಿ ಎಲ್ಲಾ ಪ್ರಗತಿಪರ ಸಂಘಟನೆಗಳೊಂದಿಗೆ ನ. 3ರಂದು ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಜನಾಗ್ರಹ ಸಭೆ ಹಾಗೂ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೂಡಿಗೆರೆ ನಾಗರೀಕ ಒಕ್ಕೂಟದ ಕಾರ್ಯದರ್ಶಿ ಜಗದೀಶ್ ಚಕ್ರವರ್ತಿ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಯಕ್ರಮ ಯಾವುದೇ ರಾಜಕೀಯ ಪ್ರೇರಿತವಲ್ಲ. ಯಾವುದೇ ಜಾತಿ, ಧರ್ಮ, ವ್ಯಕ್ತಿ, ಕ್ಷೇತ್ರಕ್ಕೆ ಅಪಮಾನ ಮಾಡುವ ಉದ್ದೇಶವಿಲ್ಲ. ಇದು ಕೇವಲ ಒಂದು ಹೆಣ್ಣಿಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟವಷ್ಟೇ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯಿ ಕುಸುಮಾವತಿ, ಬೆಳ್ತಂಗಡಿ ಪ್ರಗತಿಪರ ಚಿಂತಕ ಪ್ರಸನ್ನರವಿ, ಗಿರೀಶ್ ಮಟ್ಟೆಣ್ಣನವರ್, ನಾಗರಿಕ ವೇದಿಕೆ ಅಧ್ಯಕ್ಷ ಪ್ರಶಾತ್ ಪೂಜಾರಿ ಭಾಗವಹಿಸುವರು. ಎಲ್ಲಾ ಪ್ರಗತಿಪರ ಸಂಘಟನೆಗಳು ಸಭೆಗೆ ಬೆಂಬಲ ಸೂಚಿಸಿವೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ನಾಗರೀಕ ಒಕ್ಕೂಟದ ಉಪಾಧ್ಯಕ್ಷ ಬಿನ್ನಡಿ ಜಯಪಾಲ್, ಖಜಾಂಚಿ ಡಿ.ಎಂ ಪ್ರವೀಣ್, ಕರವೇ ಉಪಾಧ್ಯಕ್ಷ ಯಾಕೂಬ್, ಕಾರ್ಯದರ್ಶಿ ಶಿವಾನಂದ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.