
ಶೃಂಗೇರಿ: ಹಿಂದೂ ಸಮಾಜೋತ್ಸವ ದೇಶದ ಉತ್ಸವವಾಗಿದ್ದು, ಅನಾದಿಕಾಲದಿಂದ ನಡೆದು ಬಂದ ಹಿಂದೂ ಧರ್ಮ ಮತ್ತು ಭಾರತೀಯ ಪರಂಪರೆಯನ್ನು ಜಗತ್ತು ಗೌರವಿಸುತ್ತಿದೆ ಎಂದು ಶೃಂಗೇರಿ ಶಾರದಾ ಪೀಠದ ಗುರು ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಶೃಂಗೇರಿಯ ಜ್ಞಾನಭಾರತೀ ವಿದ್ಯಾ ಕೇಂದ್ರದ ಮುಂಭಾಗದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಧರ್ಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವುದು ನಮ್ಮ ಪರಂಪರೆಯಲ್ಲ. ಧರ್ಮದ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿ ಅದರ ಮೌಲ್ಯಗಳನ್ನು ಜನರಿಗೆ ತಿಳಿಸಬೇಕಾಗಿದೆ ಎಂದರು.
ಹಿಂದೂ ಧರ್ಮದಲ್ಲಿ ಅಪಾರ ಗ್ರಂಥ ಸಂಪತ್ತು ಇದೆ. ಅವುಗಳ ತಾತ್ವಿಕತೆ ಮತ್ತು ಸತ್ಯತೆಯನ್ನು ಮನನ ಮಾಡಿದಾಗ ಅಜ್ಞಾನ ನಿವಾರಣೆಯಾಗುತ್ತದೆ. ಸಂಸ್ಕಾರ, ನೈತಿಕತೆ, ಮಾನವೀಯತೆ ಧರ್ಮದ ಮೂಲ ಮೌಲ್ಯಗಳಾಗಿವೆ. ಹಿಂದೂ ಪರಂಪರೆಯನ್ನು ಗೌರವಿಸಿ ಸಂಸ್ಕೃತಿಯ ನೆಲೆಗಟ್ಟನ್ನು ಬಲಪಡಿಸಬೇಕು. ಗೃಹಸ್ಥಾಶ್ರಮಕ್ಕೆ ವಿಶೇಷ ಮಹತ್ವವಿದ್ದು, ಸಮಾಜದ ಸ್ಥಿರತೆಗೆ ಅದು ಅವಶ್ಯಕ ಎಂದು ಅವರು ಹೇಳಿದರು.
ಆರ್ಎಸ್ಎಸ್ನ ಅಖಿಲ ಭಾರತ ಕಾರ್ಯಕಾರಿಣಿ ಮಂಡಳಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಭಾರತೀಯ ಸಂಸ್ಕೃತಿಯ ಬೇರುಗಳು ವೇದ–ಉಪನಿಷತ್ತುಗಳಲ್ಲಿ ಅಡಗಿವೆ. ಸಮಾಜವನ್ನು ಒಗ್ಗೂಡಿಸುವುದು ಸಂಘದ ಉದ್ದೇಶ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹೊನ್ನವಳ್ಳಿ ಎಚ್.ಟಿ. ರಮೇಶ್ ಹೆಗ್ಡೆ, ಗೋಸಾಕಾಣಿಕೆ ಮತ್ತು ಸೇವೆಯಲ್ಲಿ ತೊಡಗಿರುವ ರೇಖಾ–ವೆಂಕಟರಮಣ ಕಾರಂತ್ ದಂಪತಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಕಾಂಚಿನಗರ ಅವರನ್ನು ಗೌರವಿಸಲಾಯಿತು. ಸಭೆಗೆ ಮುನ್ನ ಶೋಭಾಯಾತ್ರೆ ನಡೆಯಿತು.
ಆಯೋಜನಾ ಸಮಿತಿ ಅಧ್ಯಕ್ಷ ಪ್ರದೀಪ್ ಚೋಳರಮನೆ, ಉಪಾಧ್ಯಕ್ಷ ಶ್ರೀಕಾಂತ್ ಕೆ., ಸಂಯೋಜಕ ದಿವೀರ್ ಮಲ್ನಾಡ್, ಸಾಮಾಜಿಕ ಕಾರ್ಯಕರ್ತೆ ಶೈಲಜಾ ರತ್ನಾಕರ ಹೆಗ್ಡೆ ಇದ್ದರು.
ತಪ್ಪು ಕಲ್ಪನೆಗಳ ಪ್ರಚಾರದಿಂದ ಧರ್ಮದ ಮೌಲ್ಯ ಕುಸಿಯುವುದಿಲ್ಲ
ಧರ್ಮದಲ್ಲಿ ತರ್ಕಬದ್ಧ ಸಿದ್ಧಾಂತಗಳಿವೆ. ಶಂಕರಾಚಾರ್ಯರು ತರ್ಕದ ಆಧಾರದಲ್ಲಿ ವಿಚಾರ ಮಂಡಿಸಲು ಸೂಚಿಸಿದ್ದಾರೆ. ತಪ್ಪು ಕಲ್ಪನೆಗಳ ಪ್ರಚಾರದಿಂದ ಧರ್ಮದ ಮೌಲ್ಯ ಕುಸಿಯುವುದಿಲ್ಲ. ಶತಮಾನಗಳಿಂದ ಬಂದ ಸನಾತನ ಧರ್ಮ ನಮ್ಮದಾಗಿದೆ. ಸಂಸ್ಕಾರ ನೈತಿಕತೆ ಮತ್ತು ಮಾನವೀಯತೆಯ ಸಂದೇಶಗಳನ್ನು ಜನರಿಗೆ ತಲುಪಿಸಲು ಹಿಂದೂ ಸಮಾಜೋತ್ಸವ ನಿರಂತರವಾಗಿ ನಡೆಯಬೇಕು. ಒಗ್ಗಟ್ಟಿನಿಂದಲೇ ರಾಷ್ಟ್ರೀಯತೆ ಬಲಗೊಳ್ಳುತ್ತದೆ ಎಂದು ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.