ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಕೆ.ದಾಸರಹಳ್ಳಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ (ಪಿ–6120) ಗಂಟಲು, ಮೂಗಿನ ದ್ರವ ಮಾದರಿಯನ್ನು ಮತ್ತೆ ಪರೀಕ್ಷೆಗೆ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಿದ್ಯಾರ್ಥಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 55 ಮಂದಿಯ ಗಂಟಲು, ಮೂಗಿನ ದ್ರವ ಮಾದರಿ ಪರೀಕ್ಷೆ ಮಾಡಿಸಲಾಗಿದೆ. ಒಬ್ಬರಿಗೂ ಸೋಂಕು ಪತ್ತೆಯಾಗಿಲ್ಲ. ವಿದ್ಯಾರ್ಥಿಯ ಮಾದರಿಯನ್ನು ಜಿಲ್ಲಾಸ್ಪತ್ರೆಯಲ್ಲಿನ ‘ಟ್ರೂ–ನಾಟ್’(ಟ್ರೂ–ನ್ಯೂಕ್ಲಿಕ್ ಆ್ಯಸಿಡ್ ಆ್ಯಂಪ್ಲಿಕೇಷನ್ ಟೆಸ್ಟ್) ಯಂತ್ರದಲ್ಲಿ ಪರೀಕ್ಷಿಸಿದಾಗ ನಗೆಟಿವ್ ಬಂದಿದೆ. ಹೀಗಾಗಿ, ಪ್ರಥಮವಾಗಿ ಪರೀಕ್ಷಿಸಿದ್ದ ಮಾದರಿಯನ್ನು ಮತ್ತೆ ಪರೀಕ್ಷೆಗೆ ಕಳಿಸಲಾಗಿದೆ’ ಎಂದು ಹೇಳಿದರು.
‘ವರದಿ ಇನ್ನು ಬರಬೇಕಿದೆ. ವರದಿ ಬಂದ ನಂತರ ಗೊಂದಲಕ್ಕೆ ತೆರೆಬೀಳಲಿದೆ. ಈ ಹಿಂದೆ ಮೂಡಿಗೆರೆ ತಾಲ್ಲೂಕಿನ ವೈದ್ಯಾಧಿಕಾರಿ, ತರೀಕೆರೆಯ ಗರ್ಭಿಣಿ ಪ್ರಕರಣದಲ್ಲಿ ಮೊದಲ ವರದಿ ತಪ್ಪು ಪಾಸಿಟಿವ್ ಆಗಿದ್ದವು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.