
ಬಂಧನ
ಚಿಕ್ಕಮಗಳೂರು: ನಗರದ ಮನೆಯೊಂದರ ಮೇಲೆ ಕಲ್ಲು ತೂರಾಟ ಮತ್ತು ಮನೆಗೆ ನುಗ್ಗಲು ಯತ್ನಿಸಿದ ಪ್ರಕರಣ ತಿರುವು ಪಡೆದುಕೊಂಡಿದೆ. ಮತ್ತೊಂದು ಎಫ್ಐಆರ್ ದಾಖಲಿಸಿರುವ ಪೊಲೀಸರು, ಹೊಸದಾಗಿ ಬೇರೆ ಮೂವರನ್ನು ಬಂಧಿಸಿದ್ದಾರೆ.
ಗೌರಿ ಕಾಲುವೆ ಬಡಾವಣೆಯ ಭರತ್, ರಾಮನಹಳ್ಳಿಯ ದಿಲೀಪ್ ಮತ್ತು ಹರೀಶ್ ಬಂಧಿತರು. ಮನೆಯ ಸುತ್ತ ಹೊಂಚು ಹಾಕಿ ಬೀಗ ತೆಗೆಯಲು ಅಪರಿಚಿತರು ಯತ್ನಿಸಿದ್ದರು ಎಂದು ಎಚ್.ವಿ. ವಿಶ್ವನಾಥ್ ಎಂಬುವರು ನೀಡಿರುವ ದೂರು ಆಧರಿಸಿ ಮತ್ತೊಂದು ಎಫ್ಐಆರ್ ದಾಖಲಿಸಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.
‘ನನ್ನ ಪತ್ನಿ ಎಚ್.ಜಿ. ಸುಧಾ ಮತ್ತು ಮಗಳು ಮನೆಯಲ್ಲಿ ಇದ್ದಾಗ ಅಪರಿಚಿತರು ಮನೆಗೆ ನುಗ್ಗಲು ಯತ್ನಿಸಿದ್ದು, ಮನೆಯ ಸುತ್ತಮುತ್ತ ಕಾದು ಕುಳಿತಿದ್ದರು. ಇದನ್ನು ಕೇಳಿದ ಕುಟುಂಬ ಸದಸ್ಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು’ ಎಂದು ವಿಶ್ವನಾಥ್ ದೂರಿನಲ್ಲಿ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಇದಕ್ಕೂ ಮುನ್ನ ಫೆ. 16ರಂದು ತಮ್ಮ ಮನೆಯ ಮೇಲೆ ಅಪರಿಚಿತರು ಕಲ್ಲು ತೂರಿದರೆಂದು ಆರೋಪಿಸಿ ಸುಧಾ ಅವರು ದೂರು ನೀಡಿದ್ದರು. ಪೊಲೀಸರು ಪ್ರಕರಣದ ಸಂಬಂಧ ಆರು ಜನರನ್ನು ವಶಕ್ಕೆ ಪಡೆದಿದ್ದರು.
‘ಒಟ್ಟಾರೆ ಐದು ಮೊಕದ್ದಮೆ ದಾಖಲಿಸಲಾಗಿದ್ದು, ಎಲ್ಲಾ ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.