ADVERTISEMENT

ಬೀರೂರು | ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪ್ರಗತಿಗೆ ಶ್ರಮಿಸಿ: ಕೀರ್ತನಾ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:39 IST
Last Updated 20 ಜನವರಿ 2026, 2:39 IST
 ಬೀರೂರಿನ ಗುರುಭವನದಲ್ಲಿ ಸೋಮವಾರ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಎಚ್‌.ಎಸ್‌. ಕೀರ್ತನಾ ಕಡೂರು ಮತ್ತು ಬೀರೂರು ಶೈಕ್ಷಣಿಕ ವಲಯ ಮುಖ್ಯಶಿಕ್ಷಕರು ಮತ್ತು ವಿಷಯವಾರು ಶಿಕ್ಷಕರ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಸಲಹೆ, ಸೂಚನೆ ನೀಡಿದರು.     
 ಬೀರೂರಿನ ಗುರುಭವನದಲ್ಲಿ ಸೋಮವಾರ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಎಚ್‌.ಎಸ್‌. ಕೀರ್ತನಾ ಕಡೂರು ಮತ್ತು ಬೀರೂರು ಶೈಕ್ಷಣಿಕ ವಲಯ ಮುಖ್ಯಶಿಕ್ಷಕರು ಮತ್ತು ವಿಷಯವಾರು ಶಿಕ್ಷಕರ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಸಲಹೆ, ಸೂಚನೆ ನೀಡಿದರು.        

ಬೀರೂರು (ಕಡೂರು): ಎಸ್‌ಎಸ್‌ಎಲ್‌ಸಿ ಫಲಿತಾಂಶಗಳ ಉತ್ತಮಗೊಳಿಸಲು ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಎಸ್‌.ಕೀರ್ತನಾ ಸೂಚಿಸಿದರು. 

ಬೀರೂರು ಪಟ್ಟಣದ ಗುರುಭವನದಲ್ಲಿ ಸೋಮವಾರ ಕಡೂರು-ಬೀರೂರು ಶೈಕ್ಷಣಿಕ ವಲಯದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ-1ರ ಪ್ರಗತಿ ಪರಿಶೀಲನೆ ಮತ್ತು ಫಲಿತಾಂಶ ಸುಧಾರಣೆ ಸಲುವಾಗಿ ಕಳೆದ ಸಾಲಿನಲ್ಲಿ ಅತಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಮುಖ್ಯಶಿಕ್ಷಕರು ಮತ್ತು ವಿಷಯವಾರು ಶಿಕ್ಷಕರ ಕಾರ್ಯಾಗಾರದಲ್ಲಿ ಅವರು  ಮಾತನಾಡಿದರು.

ಶಿಕ್ಷಕರು ಬ್ಲೂಪ್ರಿಂಟ್‌ ಆಧಾರದಲ್ಲಿ ಪ್ರಶ್ನೆಗಳನ್ನು ಗುರುತಿಸಿ ಅವುಗಳನ್ನು ಬೋಧಿಸಿ ಮಕ್ಕಳ ಅಧ್ಯಯನಕ್ಕೆ ಒತ್ತು ಕೊಡಬೇಕು. ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳನ್ನು ನಡೆಸಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪ್ರಗತಿಗೆ ಕ್ರಮ ವಹಿಸಬೇಕು. 50 +(ಪಾರ್ಟ್‌ ಆಫ್‌ ಪಾಸಿಂಗ್‌) ಅಂಕಗಳ ಆಧಾರದಲ್ಲಿ ನೋಟ್ಸ್‌/ ಕ್ರಿಯಾಯೋಜನೆ ತಯಾರಿಸಿ ಪಠ್ಯಕ್ರಮ ಬೋಧಿಸಬೇಕು ಎಂದು ಸೂಚಿಸಿದರು.

ADVERTISEMENT

ಶಾಲೆಗೆ ಪೋಷಕರನ್ನು ಕರೆಸಿ ಮಗುವಿನ ಹಿಂದುಳಿದಿರುವಿಕೆಗೆ ಮನೆಯ ವಾತಾವರಣ ಕಾರಣವೇ ಎಂಬ ಮಾಹಿತಿಯನ್ನು ಪರಿಶೀಲಿಸಿ, ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸಲು ಯತ್ನಿಸಬೇಕು. ನಿರಂತರವಾಗಿ ಶಾಲೆಗೆ ಗೈರುಹಾಜರಾಗುವ ಮಕ್ಕಳ ಮನೆಗೆ ತೆರಳಿ, ಅವರ ನಿರಾಸಕ್ತಿ ಅಥವಾ ಗೈರುಹಾಜರಿಗೆ ಕಾರಣ ತಿಳಿದು ಮಗುವು ಶಾಲೆಗೆ ಹಾಜರಾಗಲು ಮನ ಒಲಿಸುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಮುಖ್ಯಶಿಕ್ಷಕರು ಶಿಕ್ಷಕರ ಜತೆ ವಾರಕ್ಕೆ ಒಂದು ಸಭೆ ನಡೆಸಿ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸರಳವಾದ ಬೋಧನಾ ಕ್ರಮ ಅನುಸರಿಸಿ ಸುಲಭವಾಗಿ ಅಂಕಗಳಿಸುವ ವಿಷಯ ಹಾಗೂ ಪ್ರಶ್ನೆಗಳ ಬೋಧನೆಗೆ ಒತ್ತು ನೀಡಿ ಎರಡೂ ವಲಯಗಳು ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು.  ಪ್ರತಿ ಶಾಲೆಯ ಮುಖ್ಯಶಿಕ್ಷಕರು ಮತ್ತು ವಿಷಯವಾರು ಶಿಕ್ಷಕರಿಂದ ಕೈಗೊಂಡ ಕ್ರಮಗಳ ಪರಿಶೀಲನೆ ನಡೆಸಬೇಕು. ಮಕ್ಕಳು ಉತ್ತಮ ಶಿಕ್ಷಣ ಪಡೆಯುವಲ್ಲಿ ಹಾಗೂ ಅವರು ಶಾಲೆಯಿಂದ ಹೊರಗೆ ಉಳಿಯದಂತೆ ಜವಾಬ್ದಾರಿ ನಿರ್ವಹಿಸಿ ಎಂದರು.

ಡಿಡಿಪಿಐಗಳಾದ ತಿಮ್ಮರಾಜು (ಆಡಳಿತ), ಸುಂದರೇಶ್‌ (ಅಭಿವೃದ್ಧಿ) ಮತ್ತು ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ನಾಗರಾಜ್‌ ಕಾರ್ಯಾಗಾರದಲ್ಲಿ ಪಾಲ್ಗೊಂಡ ಮುಖ್ಯಶಿಕ್ಷಕರು ಮತ್ತು ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು.

ಕಡೂರು ಬಿಇಒ ಎಂ.ಎಚ್‌.ತಿಮ್ಮಯ್ಯ, ಬೀರೂರು ಬಿಇಒ ಬುರ್ಹನುದ್ದೀನ್‌ ಚೋಪ್‌ದಾರ್‌, ವಿಷಯ ನಿರೀಕ್ಷಕರಾದ ಸತ್ಯನಾರಾಯಣ, ಕಾಂತರಾಜ್‌, ಶಿಕ್ಷಣ ಸಂಯೋಜಕರಾದ ಉಮೇಶ್‌, ಕೃಷ್ಣಮೂರ್ತಿ ಭಾಗವಹಿಸಿದ್ದರು.

ಕಡೂರು-ಬೀರೂರು ವಲಯ ಮುಖ್ಯಶಿಕ್ಷಕರ ಸಭೆ ವಾರಕ್ಕೊಮ್ಮೆ ಶಿಕ್ಷಕರ ಸಭೆ ನಡೆಸಲು ಸಲಹೆ  ಸರಳ ಕಲಿಕೆಯ ಬೋಧನೆಗೆ ಒತ್ತು ನೀಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.