
ಮೂಡಿಗೆರೆ: ಜಿ. ಅಗ್ರಹಾರದ ಶ್ರೀ ಆದಿಸುಬ್ರಹ್ಮಣ್ಯ ಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ಶನಿವಾರ ದಿವ್ಯ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ರಥೋತ್ಸವದ ಪ್ರಯುಕ್ತ ಶ್ರೀಆದಿ ಸುಬ್ರಹ್ಮಣ್ಯ ಸ್ವಾಮಿಗೆ ವಿವಿಧ ಬಗೆಯ ವಿಶೇಷ ಪೂಜೆ ಸಲ್ಲಿಸಲಾಯಿತು. ರಥೋತ್ಸವಕ್ಕೂ ಮುನ್ನ ಶ್ರೀಆದಿ ಸುಬ್ರಹ್ಮಣ್ಯ ಸ್ವಾಮಿಯ ಮೂಲ ವಿಗ್ರಹವನ್ನು ಉತ್ಸವದೊಂದಿಗೆ ಕರೆ ತರುವ ಮೂಲಕ ಪುಷ್ಪಾಂಲಕಾರಗೊಳಿಸಿದ ರಥದಲ್ಲಿ ಕೂರಿಸಲಾಯಿತು. ವಿಷೇಶವೆಂದರೆ ಹಿಂದಿನಿಂದಲೂ ಪ್ರತಿವರ್ಷ ಗರುಡವೊಂದು ರಥದ ಸುತ್ತ ಸುತ್ತಿದ ಬಳಿಕ ರಥೋತ್ಸವ ನಡೆಯುತ್ತದೆ. ಅದರಂತೆ ಶನಿವಾರ ಮಧ್ಯಾಹ್ನ 2ಗಂಟೆಗೆ ಗರಡುವೊಂದು ಆಕಾಶದಲ್ಲಿ ಹಾರಾಡುತ್ತಾ, ರಥದ ಸುತ್ತ 3 ಸುತ್ತು ಸುತ್ತಿತು. ಈ ವೇಳೆ ಭಕ್ತರ ಹರ್ಷೊದ್ಘೋಷ ಮೊಳಗಿತು. ಬಳಿಕ ರಥೋತ್ಸವ ನಡೆಯಿತು.
ರಥೋತ್ಸವದ ಹಿನ್ನೆಲೆ ದೇವಸ್ಥಾನದ ಆವರಣವನ್ನು ತಳಿರು ತೋರಣದಿಂದ ಸಿಂಗರಿಸಿ, ವಿದ್ಯುತ್ ದೀಪಾಲಂಕಾರ ಹಾಗೂ ಪುಷ್ಪಾಲಂಕಾರದಿಂದ ಅಲಂಕರಿಸಲಾಗಿತ್ತು. ಜಾತ್ರೆಗೆ ತೆರಳುವ ಜನರಿಗೆ ಮೂಡಿಗೆರೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ವಿಶೇಷ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲೆ ಮಾತ್ರವಲ್ಲದೆ ಹಾಸನ, ಕೊಡಗು ಭಾಗಗಳ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.