
ತರೀಕೆರೆ: ರಾಷ್ಟ್ರೀಯ ಹೆದ್ದಾರಿಗಾಗಿ ಸ್ವಾಧೀನ ಮಾಡಿಕೊಳ್ಳುತ್ತಿರುವ ಶ್ರೀಗಂಧ ತೋಟಕ್ಕೆ ಸರಿಯಾದ ಪರಿಹಾರ ನಿಗದಿ ಮಾಡುತ್ತಿಲ್ಲ ಎಂದು ಆರೋಪಿಸಿ ಬೆಳೆಗಾರರೊಬ್ಬರು ತಮ್ಮದೇ ತಿಥಿ ಕಾರ್ಡ್ ಮುದ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ.
ಹಳಿಯೂರು ಗ್ರಾಮದಲ್ಲಿ ಹಾದು ಹೋಗುತ್ತಿರುವ ಹೆದ್ದಾರಿ 206ರ ಬೈಪಾಸ್ ನಿರ್ಮಾಣಕ್ಕೆ ಶ್ರೀಗಂಧ ಬೆಳೆದಿರುವ 22 ಜನ ರೈತರ ಒಟ್ಟು 3.30 ಎಕರೆ ಜಮೀನು ಸ್ವಾಧೀನವಾಗುತ್ತಿದೆ. ಪರಿಹಾರ ಮೊತ್ತವನ್ನು ವೈಜ್ಞಾನಿಕವಾಗಿ ನಿಗದಿ ಮಾಡಿಲ್ಲ ಎಂದು ಆರೋಪಿಸಿಸಿ ಟಿ.ಎನ್. ವಿಶುಕುಮಾರ್ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.
‘ಮತ್ತೆ ಹುಟ್ಟಿಬಾ!! ಓ.. ಶ್ರೀಗಂಧ ಬೆಳೆಗಾರ ಎಂದು ಮುದ್ರಿಸಿ ತಿಥಿ ಕಾರ್ಯ ಫೆ.9ರಂದು ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಸಂತಾಪ ಸಭೆ, ಮಧ್ಯಾಹ್ನ 1 ಗಂಟೆಗೆ ಭೋಜನ. ಸಂತಾಪ ಸಭೆಯಲ್ಲಿ ಭಾಗವಹಿಸುವವರ ಪಟ್ಟಿಯಲ್ಲಿ ಎನ್ಎಚ್ಎಐ ಅಧಿಕಾರಿಗಳು, ಅರಣ್ಯ ಇಲಾಖೆಯ ಭ್ರಷ್ಟ ಅಧಿಕಾರಿಗಳು, ಪೊಲೀಸ್ ಇಲಾಖೆಯ ಒಳ್ಳೆಯ ಅಧಿಕಾರಿಗಳು, ವಿಶೇಷ ಭೂಸ್ವಾಧೀನಾಧಿಕಾರಿಗಳು’ ಎಂದು ಕಾರ್ಡ್ನಲ್ಲಿ ಮುದ್ರಿಸಿದ್ದಾರೆ.
‘ನ್ಯಾಯಾಲಯ ಸೂಚಿಸಿದ್ದರೂ ಭೂಮಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿಲ್ಲ. ಮತ್ತೊಮ್ಮೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅಧಿಕಾರಿಗಳ ದೌರ್ಜನ್ಯದಿಂದ ಬೇಸತ್ತು ಎರಡು ಬಾರಿ ಆತ್ಮಹತ್ಯೆಗೆ ಮುಂದಾಗಿದ್ದೆ. ಈಗ ಆ ಧೈರ್ಯ ಇಲ್ಲ. ದಯಾ ಮಾರಣಕ್ಕೆ ರಾಜ್ಯಪಾಲರಿಗೂ ಅರ್ಜಿ ಸಲ್ಲಿಸಿದ್ದೇನೆ. ಪರಿಹಾರ ನಿಗದಿ ವಿಷಯ ನ್ಯಾಯಾಲಯದಲ್ಲಿ ಇದ್ದರೂ ಫೆ.9ರಂದು ಮರ ಕಡಿತಲೆಗೆ ಅಧಿಕಾರಿಗಳು ಮುಂದಾಗುತ್ತಿದ್ದಾರೆ. ಆದ್ದರಿಂದ ತಿಥಿ ಕಾರ್ಡ್ ಹಂಚಿ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದು ಟಿ.ಎನ್. ವಿಶುಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಇದೇ ವಿಷಯಕ್ಕೆ 2025ರ ಜೂನ್ 10ರಂದು ಹೈಟೆನ್ಷನ್ ವಿದ್ಯುತ್ ಮಾರ್ಗದ ಟವರ್ ಏರಿ ಪ್ರತಿಭಟನೆ ನಡೆಸಿದ್ದರು. ಅಧಿಕಾರಿಗಳು ಮನವೊಲಿಸಿ ಕೆಳಗಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.