ತೇಜಸ್ವಿ ಸೂರ್ಯ
ಚಿಕ್ಕಮಗಳೂರು: ಬೆಂಗಳೂರಿನ ಗಾಳಿ ಆಂಜನೇಯಸ್ವಾಮಿ ದೇಗುಲವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯಲು ಸರ್ಕಾರ ಮುಂದಾಗಿದೆ. ಇದರ ವಿರುದ್ಧ ನ್ಯಾಯಾಲಯ ಮತ್ತು ಜನ ಹೋರಾಟ ಎರಡನ್ನೂ ರೂಪಿಸಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
‘ಹಿಂದೂ ದೇಗುಲ ಅಲ್ಲಿನ ಭಕ್ತರಿಗೆ ಸೇರಿದೆ. ಜನ ಭಯ ಮತ್ತು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಕ್ಷುಲ್ಲಕ ಕಾರಣ ಸೃಷ್ಟಿ ಮಾಡಿ ದೇವಸ್ಥಾನಗಳ ಮೇಲೆ ಸರ್ಕಾರ ಕಣ್ಣಿಡುವುದು ಸರಿಯಲ್ಲ. ಇದು ಅಕ್ಷಮ್ಯ ನಡೆ’ ಎಂದು ಸುದ್ದಿಗಾರರಿಗೆ ಶನಿವಾರ ಹೇಳಿದರು.
‘ಯಾವುದೇ ನೋಟಿಸ್ ಇಲ್ಲದೆ, ತನಿಖೆ ಮಾಡದೆ ಕೋಟ್ಯಂತರ ರೂಪಾಯಿ ಹುಂಡಿ ಮೇಲೆ ಸರ್ಕಾರ ಕಣ್ಣಿರಿಸಿದೆ. ದೇಗುಲದ ಟ್ರಸ್ಟಿ ಅವರೊಂದಿಗೆ ಮಾತನಾಡಿದ್ದೇನೆ. ಈ ಸಂಬಂಧ ಸೋಮವಾರ ನ್ಯಾಯಾಲಯದ ಮೊರೆ ಹೋಗುತ್ತೇವೆ. ವಿಜಯನಗರದಲ್ಲಿ ಜನ ಹೋರಾಟವನ್ನೂ ರೂಪಿಸುತ್ತೇವೆ’ ಎಂದರು.
ಮಸೀದಿ ಮತ್ತು ಚರ್ಚ್ಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಧೈರ್ಯ ಇದೆಯೇ? ಹಿಂದೂಗಳು ಸುಮ್ಮನಿರುತ್ತಾರೆ ಎಂಬ ಕಾರಣಕ್ಕೆ ಅವರ ದೇಗುಲದ ಮೇಲೆ ಕಣ್ಣಾಕುವುದು ಸರಿಯಲ್ಲ. ದಯವಿಟ್ಟು ಈ ರೀತಿಯ ಸಾಹಸ ಕೈಬಿಡಬೇಕು ಎಂದು ಹೇಳಿದರು.
‘ಸರ್ಕಾರಕ್ಕೆ ಅಲ್ಲಿ ನಡೆಯುವ ಭ್ರಷ್ಟಾಚಾರ ನಿಲ್ಲಿಸಲು ಆಗುವುದಿಲ್ಲ. ದೇವಸ್ಥಾನವನ್ನು ಯಾವ ನಂಬಿಕೆ ಇಟ್ಟು ಕೊಡುವುದು. ಯಾವುದೇ ಕಾರಣಕ್ಕೂ ಭಕ್ತರು ವಿಚಲಿತರಾಗುವುದು ಬೇಡ. ಸರ್ಕಾರವೇ ಸಾಚಾ ಅಲ್ಲ, ದೇಗುಲದ ಬಗ್ಗೆ ಮಾತನಾಡಲು ಹೊರಟಿದೆ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿವೆ, ದೇವಸ್ಥಾನದ ತಟ್ಟೆ ನೋಡುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.