ADVERTISEMENT

ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ, ₹2.06 ಲಕ್ಷದ ಮೊಬೈಲ್ ವಶ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 6:39 IST
Last Updated 1 ಡಿಸೆಂಬರ್ 2021, 6:39 IST
ಅಜ್ಜಂಪುರದಲ್ಲಿ ಕಳವು ಆರೋಪಿಗಳಿಂದ ವಶಕ್ಕೆ ಪಡೆದಿರುವ ಮೊಬೈಲ್, ಕೃತ್ಯಕ್ಕೆ ಬಳಸಿದ್ದ ಬೈಕ್ ಪ್ರದರ್ಶಿಸಿದ ಪೊಲೀಸರು.
ಅಜ್ಜಂಪುರದಲ್ಲಿ ಕಳವು ಆರೋಪಿಗಳಿಂದ ವಶಕ್ಕೆ ಪಡೆದಿರುವ ಮೊಬೈಲ್, ಕೃತ್ಯಕ್ಕೆ ಬಳಸಿದ್ದ ಬೈಕ್ ಪ್ರದರ್ಶಿಸಿದ ಪೊಲೀಸರು.   

ಅಜ್ಜಂಪುರ: ಪಟ್ಟಣದ ಮೊಬೈಲ್ ಅಂಗಡಿಯಲ್ಲಿ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸುಬ್ರಹ್ಮಣ್ಯ, ವಿದ್ಯಾರ್ಥಿ ನರಸಿಂಹ, ಗಾರೆ ಕೆಲಸಗಾರ ಪ್ರಜ್ವಲ್ ಆರೋಪಿಗಳಾಗಿದ್ದು, ಎಲ್ಲರೂ 19 ವರ್ಷ ವಯಸ್ಸಿನವರಾಗಿದ್ದಾರೆ. ಆರೋಪಿಗಳಿಂದ ಕಳವು ಮಾಡಿದ್ದ ₹2.06 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 11 ಮೊಬೈಲ್, ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಚನ್ನಗಿರಿಯ ಬೀರೂರು ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರದ ಚಹಾ ಅಂಗಡಿಯಲ್ಲಿ ಇದ್ದ ಆರೋಪಿಗಳನ್ನು, ಡಿವೈಎಸ್ಪಿ ಏಗನಗೌಡರ ಮಾರ್ದರ್ಶನ ದಲ್ಲಿ ಇನ್‌ಸ್ಪೆಕ್ಟರ್‌ ಲಿಂಗರಾಜು ನೇತೃತ್ವದ ಪಿಎಸ್‌ಐ ಜಿ. ಕೆ. ಬಸವರಾಜು, ಸಿಬ್ಬಂದಿ ಯತೀಶ್, ಮಹೇಶ್ವರಪ್ಪ, ಬಸವರಾಜಪ್ಪ, ಶ್ರೀನಿವಾಸ್, ಕಿರಣ್ ಕುಮಾರ್, ಶಿವಾನಂದ್, ನಯಾಜ್ ತಂಡ ಆರೋಪಿಗಳನ್ನು ಬಂಧಿಸಿದೆ.

ADVERTISEMENT

ಪ್ರಕರಣ: ಪಟ್ಟಣದ ಟಿ.ಎಚ್. ರಸ್ತೆಯ ಗಿರಿಲಕ್ಷ್ಮೀ ಎಂಟರ್ ಪ್ರೈಸ್ ಮೊಬೈಲ್ ಅಂಗಡಿಯ ಶಟರ್ ಮುರಿದು ಮೇ25ರಂದು ₹2.60 ಲಕ್ಷ ಮೌಲ್ಯದ ಮೊಬೈಲ್‌ ಫೋನ್‌ಗಳನ್ನು ಆರೋಪಿಗಳು ಕಳವು ಮಾಡಿದ್ದರು. ಅಂಗಡಿ ಮಾಲೀಕ ಮಧು ಕುಮಾರ್ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.