ADVERTISEMENT

ಯುಪಿಎಸ್‌ಸಿ: ಯಶಸ್ವಿನಿಗೆ 71ನೇ ರ‌್ಯಾಂಕ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 13:12 IST
Last Updated 4 ಆಗಸ್ಟ್ 2020, 13:12 IST
   

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಬಾಣೂರಿನ ಬಿ.ಯಶಸ್ವಿನಿ ಅವರು ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) ಪರೀಕ್ಷೆಯಲ್ಲಿ 71ನೇ ರ‌್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕಳೆದ ಬಾರಿ 293 ನೇ ರ‌್ಯಾಂಕ್ ಪಡೆದಿದ್ದರು.ಪ್ರೊಬೇಷನರಿ ಅಧಿಕಾರಿಯಾಗಿ ನವದೆಹಲಿಯಲ್ಲಿ ಇಂಡಿಯನ್‌ ಡಿಫೆನ್ಸ್‌ ಎಸ್ಟೇಟ್ಸ್‌ ಸರ್ವಿಸ್‌ (ಐಡಿಇಎಸ್‌) ತರಬೇತಿ ಪಡೆಯುತ್ತಿದ್ದಾರೆ.

2017ರಲ್ಲಿ ಬಿ.ಇ (ಇ&ಸಿ) ಮುಗಿಸಿದ ಬಳಿಕ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಪ್ರಥಮ ಪ್ರಯತ್ನದಲ್ಲೂ ಯಶಸ್ವಿಯಾಗಿದ್ದರು. ಕಳೆದ ಬಾರಿ ನವದೆಹಲಿಯಲ್ಲಿ ಕೋಚಿಂಗ್‌ ಪಡೆದಿದ್ದರು.

ADVERTISEMENT

‘ಕಳೆದ ಬಾರಿ ಕಡಿಮೆ ಅಂಕ ಗಳಿಸಿದ್ದ ವಿಷಯಗಳು, ಐಚ್ಛಿಕ ವಿಷಯ ಮಾನವಶಾಸ್ತ್ರಕ್ಕೆ (ಆಂಥ್ರಪಾಲಜಿ) ಒತ್ತು ನೀಡಿ ಅಭ್ಯಾಸ ಮಾಡಿದ್ದೆ. ಆನ್‌ಲೈನ್‌ ಟೆಸ್ಟ್‌ಗಳನ್ನು ತೆಗೆದುಕೊಂಡಿದ್ದೆ. 71ನೇ ರ‌್ಯಾಂಕ್ ಸಂದಿರುವುದು ಖುಷಿಯಾಗಿದೆ’ ಎಂದು ಯಶಸ್ವಿನಿ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

**

ಯಶಸ್ವಿನಿ ಅವರು ಗುಬ್ಬಿಹಳ್ಳಿಯ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಬಿ.ಎಸ್‌.ಬಸವರಾಜಪ್ಪ ಮತ್ತು ಗೃಹಿಣಿ ಪಿ.ವಿ.ಇಂದಿರಾ ದಂಪತಿ ಪುತ್ರಿ. ಬಾಣೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಕನ್ನಡ ಮಾಧ್ಯಮದಲ್ಲಿ ಪೂರೈಸಿದ್ದಾರೆ. ಕಡೂರಿನ ದೀಕ್ಷಾ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿದ್ದಾರೆ.

ಶಿವಮೊಗ್ಗದ ಅರಬಿಂದೊ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡಿದ್ದಾರೆ. ‌ಬೆಂಗಳೂರಿನ ಆರ್‌.ವಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿ.ಇ (ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಷನ್‌) ಮುಗಿಸಿದ್ದಾರೆ. ಎಸ್‌ಎಸ್‌ಎಲ್‌ಸಿ– ಶೇ 96, ಪಿಯುಸಿ(ವಿಜ್ಞಾನ)– ಶೇ 98 ಹಾಗೂ ಬಿ.ಇ– 9.4 (ಸಿಜಿಪಿಎ) ಅಂಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.