ಬಾಳೆಹೊನ್ನೂರು: ‘ಧರ್ಮದಲ್ಲಿ ಮಾರ್ಗ ವಿದೆ, ಆದರೆ ವೇಗವಿಲ್ಲ. ವಿಜ್ಞಾನದಲ್ಲಿ ವೇಗವಿದೆ, ಆದರೆ ಮಾರ್ಗವಿಲ್ಲ. ಇವೆರಡೂ ಸಮನ್ವಯತೆಯಿಂದ ಸಾಗಿದರೆ ದೇಶಾಭಿವೃದ್ಧಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಧರ್ಮದ ದೋಣಿಗೆ ರಂಧ್ರ ಕೊರೆಯುವ ಕೆಲಸ ಯಾರೂ ಮಾಡಬಾರದು’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.
ಪೀಠಾರೋಹಣದ 30ನೇ ವರ್ಧಂತಿ ಅಂಗವಾಗಿ ನಡೆಯುತ್ತಿರುವ ಶತರುದ್ರ ಯಾಗದ 3ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ‘ಹೆತ್ತ ತಾಯಿ ಹೊತ್ತ ಭೂಮಿ ಎಷ್ಟು ಮುಖ್ಯವೋ ಧರ್ಮವು ಅಷ್ಟೇ ಮುಖ್ಯ. ವಿವೇಕದ ತುತ್ತ ತುದಿಯೇ ದೈವ ಸಾಕ್ಷಾತ್ಕಾರ. ಅಂತರಂಗ ಬಹಿರಂಗ ಶುದ್ಧಿಗೆ ರೇಣುಕಾಚಾರ್ಯರು ಕೊಟ್ಟ ದಶ ಧರ್ಮ ಸೂತ್ರಗಳು ಎಲ್ಲರ ಬದುಕಿಗೆ ಬೆಳಕಾಗಿವೆ’ ಎಂದರು.
ಕಣ್ವಕುಪ್ಪಿ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ನೀರಿಲ್ಲದ ನದಿ, ಅತಿಥಿ ಇಲ್ಲದ ಮನೆ, ಫಲವಿಲ್ಲದ ವೃಕ್ಷ ಹೇಗೆ ವ್ಯರ್ಥವೋ ಹಾಗೆಯೇ ಜೀವನದಲ್ಲಿ ಗುರು ಮತ್ತು ಗುರಿ ಇಲ್ಲದಿದ್ದರೆ ಬಾಳು ನಿರರ್ಥಕ’ ಎಂದರು.
ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಶತರುದದ್ರ ಯಾಗದ ಸಂಚಾಲಕತ್ವ ವಹಿಸಿದ್ದರು. ಚನ್ನಬಸವಾರಾಧ್ಯರು ಮತ್ತು 21 ಜನ ಪುರೋಹಿತರಿಂದ ಶತರುದ್ರ ಯಾಗದ 3ನೇ ದಿನದ ಪೂಜಾ ಕಾರ್ಯ ನೆರವೇರಿತು. ಎಮ್ಮಿಗನೂರು, ಮಳಲಿ, ಕೆಂಭಾವಿ, ಸಂಗೊಳ್ಳಿ, ಹಾವೇರಿ, ಮಸ್ಕಿ, ಅರಗಿನಡೋಣಿ, ಸಿಂಧನೂರು, ದೊಡ್ಡ ಸಗರ, ಚಿಮ್ಮಲಗಿ ಸ್ವಾಮೀಜಿ ಇದ್ದರು.
ತಿಪಟೂರಿನ ಶಿವಶಂಕರ- ಜಯಮ್ಮ, ಭದ್ರಾವತಿಯ ದ್ವಾರಕ, ಸ್ವರೂಪಿಣಿ, ಚಿಕ್ಕಮಗಳೂರಿನ ಯು.ಎಂ. ಬಸವರಾಜ ಮತ್ತು ದೇವರಾಜ್, ಮಲೆಬೆನ್ನೂರಿನ ಗುರುಪಾದಯ್ಯ- ಪುಷ್ಪಾವತಿ, ವೀರಯ್ಯ- ಯಶೋದಾ ಹಿರೇಮಠ, ದಾವಣಗೆರೆ ಹಂಪಯ್ಯ-ಬಸಲಿಂಗಮ್ಮ ದಂಪತಿ ಪೂಜೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.