ಕಡೂರು: ‘ವೇದಕಾಲದಲ್ಲಿ ಸ್ತ್ರೀಯರ ಸ್ಥಾನ ಮಾನ ಹೇಗಿತ್ತು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ’ ಎಂದು ಕನ್ನಡ ಪೂಜಾರಿ ಡಾ.ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಂಗಳವಾರ ಕಡೂರು ರೋಟರಿ ಕ್ಲಬ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಮಹಾರಾಜ ಸಂಸ್ಕೃತ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎಚ್.ಎಸ್.ವಿಜಯಲಕ್ಷ್ಮಿ ವಿರಚಿತ ‘ವೇದಕಾಲೀನ ಸ್ತ್ರೀ’ ಹಾಗೂ ’ಗಾಂಧೀಜಿ ಮತ್ತು ಅಧ್ಯಾತ್ಮ’ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವೇದ ಕಾಲದಲ್ಲಿ ಸ್ತ್ರೀಯರಿಗಿದ್ದ ಸ್ಥಾನಮಾನ ಮತ್ತು ಅವರಿಗೆ ಸಮಾಜದ ಸಂವೇದನೆ ಹೇಗಿತ್ತು ಎಂಬುದನ್ನು ಸಂಶೋಧನಾತ್ಮಕವಾಗಿ ವಿವರಿಸಿರುವ ಲೇಖಕಿ, ಗಾಂಧೀಜಿಯವರ ಮೇಲೆ ಅಧ್ಯಾತ್ಮದ ಪ್ರಭಾವವನ್ನು ಅಷ್ಟೇ ಸಮರ್ಥವಾಗಿ ನಿರೂಪಿಸಿದ್ದಾರೆ. ಈ ಪುಸ್ತಕವನ್ನು ಅವಲೋಕಿಸಿ, ಅಂದು ಮಹಿಳೆಯರ ಸ್ಥಿತಿಗತಿ ತಿಳಿಯುವ ಜೊತೆ ಇಂದಿನ ಕಾಲಮಾನಕ್ಕೆ ತುಲನೆ ಮಾಡಬಹುದು. ಸಂಸ್ಕೃತ ಭಾಷೆಯ ಸೊಗಡನ್ನು ಅರ್ಥಮಾಡಿಕೊಂಡು ಅದರಲ್ಲಿ ಕೃತಿ ರಚನೆ ಮಾಡುವುದು ಕಡಿಮೆ ಸಾಧನೆಯಲ್ಲ. ಅಂತಹ ಹೆಮ್ಮೆಯ ಸಾಧನೆ ವಿಜಯಲಕ್ಷ್ಮಿ ಅವರದು’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನಲ್ಲಿ ಸೀಮಿತ ಸಂಖ್ಯೆಯ ಮಹಿಳಾ ಸಾಹಿತಿಗಳಲ್ಲಿ ತಾಲ್ಲೂಕಿನ ಪಂಚೆಹೊಸಳ್ಳಿಯ ವಿಜಯಲಕ್ಷ್ಮಿ ಅವರ ಸಾಧನೆ ಬಹುದೊಡ್ಡದು ಎಂದರು.
ಲೇಖಕಿ ಡಾ.ವಿಜಯಲಕ್ಷ್ಮಿ ಮಾತನಾಡಿ, ‘ಮೈಸೂರಿನಂಥ ಸಾಂಸ್ಕೃತಿಕ ನಗರದಲ್ಲಿದ್ದರೂ, ಮೂಲನೆಲದ ತಾಲ್ಲೂಕಿನಲ್ಲಿ ಪುಸ್ತಕಗಳು ಹೊರಬಂದಿರುವುದು ಸಂತಸ ತಂದಿದೆ. ಸಂಸ್ಕೃತ ಭಾಷೆಯ ಹಿರಿಮೆಯನ್ನು ಸಾರುವುದು ನನ್ನ ನಿರಂತರ ಕಾಯಕ’ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಯುವರಾಜ ಕಾಲೇಜು ನಿವೃತ್ತ ಪ್ರಾಧ್ಯಾಪಕ ಡಾ.ವೈ.ಸಿ.ನಂಜುಂಡಯ್ಯ ಉದ್ಘಾಟಿಸಿದರು. ಲಕ್ಚ್ಮೀಶ್ ಪಿ.ಶಿರಹಟ್ಟಿ, ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಬಿ.ಪ್ರಕಾಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.