ಆಲ್ದೂರು: ಸಮೀಪದ ಆಣೂರು ಪಂಚಾಯಿತಿ ವ್ಯಾಪ್ತಿಯ ಹೆಡದಾಳು, ಹುಣಸೆ ಮಕ್ಕಿ, ಹಳಿಯೂರು, ಕೆಂಬಾರೆ, ಮಾವಿನಗುಣಿ ಗ್ರಾಮಗಳಲ್ಲಿ ಒಂಟಿ ಆನೆ ಕಾಣಿಸಿಕೊಂಡಿದೆ.
ಇಲ್ಲಿನ ಕಾಫಿ ತೋಟಗಳಲ್ಲಿ ಆನೆ ಸಂಚರಿಸುತ್ತಿದ್ದು, ಹುಣಸೆ ಮಕ್ಕಿ ನಾರಾಯಣಗೌಡ ಕಾಫಿ ತೋಟದಲ್ಲಿ ಬೀಡು ಬಿಟ್ಟಿತ್ತು. ಇದರಿಂದಾಗಿ ಈ ಪರಿಸರದ ಜನರಲ್ಲಿ ಆತಂಕ ಮನೆ ಮಾಡಿತ್ತು.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಸದಸ್ಯರು ತುರ್ತು ಸಭೆ ಕರೆದು, ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳದಂತೆ ಧ್ವನಿವರ್ಧಕದ ಮೂಲಕ ಕಾರ್ಮಿಕರಿಗೆ ಸೂಚನೆ ನೀಡಿದರು.
ವಲಯ ಅರಣ್ಯ ಅಧಿಕಾರಿ ಭೇಟಿ ನೀಡಿದ್ದು, ‘ಆನೆ ಓಡಿಸುವ ಕಾರ್ಯಾಚರಣೆ ಪ್ರಾರಂಭಿಸಲಾ ಗುವುದು’ ಎಂದು ತಿಳಿಸಿದ್ದಾರೆ ಎಂದು ಆಣೂರು ಪಂಚಾಯಿತಿ ಸದಸ್ಯ ಹೆಡದಾಳು ದಿನೇಶ್ ತಿಳಿಸಿದರು.
ಸಿಗದ ಸುಳಿವು
ಮೂಡಿಗೆರೆ: ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಡ್ಡಾಡುತ್ತಿರುವ ಕಾಡಾನೆ ಸೆರೆ ಕಾರ್ಯಚರಣೆಯು ಗುರುವಾರ ನಡೆದಿದ್ದು, ಕಾಡಾನೆಯ ಸುಳಿವು ಸಿಗದೇ ಹಿಂತಿರುಗುವಂತಾಯಿತು.
ಕಾಡಾನೆ ಸಂಚಾರದ ಮಾಹಿತಿ ಸಂಗ್ರಹಕ್ಕಾಗಿ ರಚಿಸಿರುವ ಮೂರು ತಂಡಗಳು ಬುಧವಾರ ಕಾರ್ಯಾಚರಣೆ ನಡೆಸಿದರೂ, ಕಾಡಾನೆ ಸುಳಿವು ಸಿಗದ ಕಾರಣ ಸಾಕಾನೆಗಳನ್ನು ಶಿಬಿರದಿಂದ ಹೊರಗೆ ಕರೆತರಲಿಲ್ಲ. ಗುರುವಾರ ನಸುಕಿನಲ್ಲಿ ಒಂದು ಕಾಡಾನೆಯು ಬೆಳಗೋಡು, ಕೆಂಜಿಗೆ ಭಾಗದಲ್ಲಿ ತಿರುಗಾಡಿರುವ ಕುರುಹು ಪತ್ತೆಯಾಗಿದ್ದು, ಬೆಳಿಗ್ಗೆ 7ರಿಂದಲೂ ಪರಿಣಿತರ ತಂಡವು ಅರಣ್ಯದಲ್ಲಿ ಕಾಡಾನೆಗಳಿಗಾಗಿ ಹುಡುಕಾಟ ನಡೆಸಿತು. ಕಾರ್ಯಾಚರಣೆಗಾಗಿ ಬಂದಿರುವ, ಶಿಬಿರದಲ್ಲಿದ್ದ ಆರು ಸಾಕಾನೆಗಳನ್ನು ಬೆಳಗೋಡು ಗ್ರಾಮಕ್ಕೆ ಕರೆತರಲಾಗಿತ್ತು. ಆದರೆ ಕಾಡಾನೆಗಳ ಸುಳಿವು ಸಿಗದ ಹಿನ್ನೆಲೆಯಲ್ಲಿ ಸಂಜೆ ಪುನಃ ಶಿಬಿರಕ್ಕೆ ತರಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.