ADVERTISEMENT

ಎನ್‌.ಆರ್ ‍ಪುರ | ಏಡ್ಸ್ ರೋಗದ ಭಯಬೇಡ ಎಚ್ಚರಿಕೆ ಇರಲಿ: ಡಾ.ವೀರಪ್ರಸಾದ್

ಸರ್ಕಾರಿ ಕಾಲೇಜಿನಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಡಾ.ವೀರಪ್ರಸಾದ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 5:54 IST
Last Updated 3 ಡಿಸೆಂಬರ್ 2022, 5:54 IST
ನರಸಿಂಹರಾಜಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮಕ್ಕೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೀರಪ್ರಸಾದ್ ಚಾಲನೆ ನೀಡಿದರು. ಡಾ.ಕೆ.ಉಮೇಶ್, ಡಾ.ಅಣ್ಣಪ್ಪ ಎನ್.ಮಳೀಮಠ್ ಇದ್ದರು
ನರಸಿಂಹರಾಜಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮಕ್ಕೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೀರಪ್ರಸಾದ್ ಚಾಲನೆ ನೀಡಿದರು. ಡಾ.ಕೆ.ಉಮೇಶ್, ಡಾ.ಅಣ್ಣಪ್ಪ ಎನ್.ಮಳೀಮಠ್ ಇದ್ದರು   

ನರಸಿಂಹರಾಜಪುರ: ಏಡ್ಸ್ ರೋಗದ ಬಗ್ಗೆ ಭಯ ಬೇಡ ಎಚ್ಚರಿಕೆ ಇರಬೇಕು ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೀರಪ್ರಸಾದ್ ತಿಳಿಸಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜೆನಲ್ಲಿ ಶುಕ್ರವಾರ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

1988ರಿಂದ ಪ್ರತಿ ವರ್ಷ ಏಡ್ಸ್ ದಿನಾಚರಣೆಯನ್ನು ನಡೆಸಲಾಗುತ್ತಿದ್ದು ಏಡ್ಸ್ ರೋಗದ ಬಗ್ಗೆ ಅರಿವನ್ನು ಮೂಡಿಸುವುದು, ಏಡ್ಸ್ ರೋಗಿಗಳನ್ನು ಆರೈಕೆ ಮಾಡುವುದು, ತಾರತಮ್ಯವನ್ನು ಹೋಗಲಾಡಿಸುವುದು, ಎಚ್ಐವಿ ಪರೀಕ್ಷೆಯನ್ನು ಹೆಚ್ಚು ಮಾಡುವುದು ಈ ದಿನದ ಮಹತ್ವವಾಗಿದೆ. 1981ರಲ್ಲಿ ಕಾಣಿಸಿದ ಈ ಕಾಯಿಲೆಯನ್ನು ಕೇವಲ ಆರೋಗ್ಯ ಶಿಕ್ಷಣದಿಂದ ನಿಯಂತ್ರಿಸಲು ಸಾಧ್ಯ. ಹಾಗಾಗಿ ಎಲ್ಲರೂ ಕಾಯಿಲೆ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ADVERTISEMENT

ಡಾ.ಗ್ರಿಫಿತ್ ಜೆನ್ನಿಫರ್ ಉಪನ್ಯಾಸ ನೀಡಿ, ‘ಎಚ್ಐವಿ ಎಂಬುದು ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ವೈರಸ್ ಆಗಿದ್ದು. ಈ ವೈರಸ್ ಸೋಂಕಿನಿಂದ ಏಡ್ಸ್ ಎನ್ನುವ ಕಾಯಿಲೆ ಬರುತ್ತದೆ. ಈ ಕಾಯಿಲೆಗೆ ಯಾವುದೇ ವಿಧವಾದ ಲಸಿಕೆ ಮತ್ತು ಔಷಧ ಕಂಡು ಹಿಡಿಯದಿರುವುದರಿಂದ ಈ ಕಾಯಿಲೆ ಬಗ್ಗೆ ಜಾಗೃತರಾಗಿ ಇರುವುದು ಅವಶ್ಯಕ’ ಎಂದರು.

ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ, ಸೋಂಕಿತ ಸೂಜಿ ಮತ್ತು ಸಿರಂಜ್ ಬಳಕೆಯಿಂದ, ಸೋಂಕಿತ ರಕ್ತವನ್ನು ಪಡೆಯುವುದರಿಂದ ಮತ್ತು ಸೋಂಕಿತ ತಾಯಿಯಿಂದ ಮಗುವಿಗೆ ಈ ನಾಲ್ಕು ಮಾರ್ಗಗಳ ಮೂಲಕ ಎಚ್ಐವಿ ಹರಡುತ್ತದೆ. ಶಂಕೆ ಇರುವ ಎಲ್ಲರೂ ತಾಲ್ಲೂಕು ಆಸ್ಪತ್ರೆಯ ಐಸಿಟಿಸಿ ಕೇಂದ್ರಕ್ಕೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ರೋಗನಿರೋಧಕ ಶಕ್ತಿ ಇರುವ ವ್ಯಕ್ತಿಯು ಎಚ್‌ಐವಿ ಪೀಡಿತ ವ್ಯಕ್ತಿಯು ಯಾವುದೇ ಲಕ್ಷಣಗಳು ಇಲ್ಲದೆ ಐದರಿಂದ ಹತ್ತು ವರ್ಷದವರೆಗೆ ಜೀವಿಸಲು ಸಾಧ್ಯ. ಆ ಸಂದರ್ಭದಲ್ಲಿ ಏಡ್ಸ್ ಹರಡುವ ಸಾಧ್ಯತೆ ಇರುತ್ತದೆ. ದೇಹದ ತೂಕ ಕಡಿಮೆಯಾಗುವುದು, ತಿಂಗಳಿಂದ ಕಾಡುವ ಜ್ವರ, ಭೇದಿ, ಚರ್ಮದ ಕಾಯಿಲೆ ಬಾಯಿಹುಣ್ಣು, ಹರ್ಪಿಸ್, ಕ್ಷಯ ರೋಗ ಏಡ್ಸ್ ಕಾಯಿಲೆಯ ಲಕ್ಷಣಗಳಾಗಿದೆ. ಕಾಯಿಲೆ ಬಗ್ಗೆ ಮಾಹಿತಿಯನ್ನು ಪಡೆಯುವುದು ಈ ಕಾಯಿಲೆಯ ನಿಯಂತ್ರಣದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಕೆ ಉಮೇಶ್ ವಹಿಸಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಅಣ್ಣಪ್ಪ ಎನ್. ಮಳೀಮಠ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.‍ಪಿ.ಬೇಬಿ, ಸುಜಾತಾ, ಕೃಷ್ಣ, ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.