ADVERTISEMENT

ಯೋಗಾ ನರಸಿಂಹ ದೇವಾಲಯ ನವೀಕರಣ

ನ. 30 ರಂದು ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 6:54 IST
Last Updated 28 ನವೆಂಬರ್ 2022, 6:54 IST
ಅಜ್ಜಂಪುರ ತಾಲ್ಲೂಕಿನ ಬಗ್ಗವಳ್ಳಿ ಗ್ರಾಮದ ಯೋಗ ನರಸಿಂಹ ದೇವಾಲಯ
ಅಜ್ಜಂಪುರ ತಾಲ್ಲೂಕಿನ ಬಗ್ಗವಳ್ಳಿ ಗ್ರಾಮದ ಯೋಗ ನರಸಿಂಹ ದೇವಾಲಯ   

ಅಜ್ಜಂಪುರ: ‘ತಾಲ್ಲೂಕಿನ ಬಗ್ಗವಳ್ಳಿಯ ಯೋಗಾನರಸಿಂಹ ದೇವಾಲಯದ ಅಭಿವೃದ್ಧಿಗೆ, ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆ ₹1.55 ಕೋಟಿ ಬಿಡುಗಡೆಗೊಳಿಸಿದೆ’ ಎಂದು ದೇವಾಲಯದ ಟ್ರಸ್ಟ್ ಅಧ್ಯಕ್ಷ ಅನಂತ್ ತಿಳಿಸಿದ್ದಾರೆ.

ಶಾಸಕ ಡಿ.ಎಸ್. ಸುರೇಶ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಸಹಕಾರದಿಂದ ಸರ್ಕಾರ ಮತ್ತು ಇಲಾಖೆ, ದೇವಾಲಯ ನವೀಕರಣಕ್ಕೆ ಹಣ ಬಿಡುಗಡೆಗೊಳಿಸಿರುವುದು ಹರ್ಷ ತಂದಿದೆ. ಕಾಮಗಾರಿ ಭೂಮಿಪೂಜೆ ನ.30ರ ಬೆಳಿಗ್ಗೆ 6ಕ್ಕೆ ದೇವಾಲಯದ ಆವರಣದಲ್ಲಿ ಜರುಗಲಿದೆ ಎಂದು ಟ್ರಸ್ಟ್‌ನ ಸಿದ್ದೇಗೌಡ ತಿಳಿಸಿದ್ದಾರೆ.

ಇಲಾಖೆಯಿಂದ ಅನುಮತಿ ಪಡೆದು, ಟ್ರಸ್ಟ್ ವತಿಯಿಂದ ₹12 ಲಕ್ಷ ವೆಚ್ಚದಲ್ಲಿ ದೇವಾಲಯದ ಹೊರಾಂಗಣ ಸ್ವಚ್ಛತೆ, 380ಕ್ಕೂ ಹೆಚ್ಚು ವಿವಿಧ ಫಲ– ಪುಷ್ಪ, ಅಲಂಕಾರಿಕ ಸಸಿಗಳನ್ನು ಬೆಳೆಸಿ, ಉದ್ಯಾನ ಹಾಗೂ ₹10 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿದೆ ಎಂದು ಟ್ರಸ್ಟ್ ಉಪಾಧ್ಯಕ್ಷ ಮರುಳಸಿದ್ದಪ್ಪ ತಿಳಿಸಿದ್ದಾರೆ.

ADVERTISEMENT

ಐತಿಹಾಸಿಕ ದೇವಾಲಯ ಉಳಿಸುವ ದಿಸೆಯಲ್ಲಿ ಯೋಗಾನರಸಿಂಹ ದೇವಾಲಯ ಅಭಿವೃದ್ಧಿ ಸಂಘ ನಿರಂತರ ಪ್ರಯತ್ನ ನಡೆಸಿತ್ತು. ಹೊಯ್ಸಳರ ವಾಸ್ತು ಕಲಾ ವೈಭವಕ್ಕೆ ಸಾಕ್ಷಿಯಾಗಿದ್ದು, ಶಿಥಿಲಾವಸ್ಥೆಗೆ ತಲುಪಿತ್ತು. ಭಕ್ತರ ಸಹಕಾರದಲ್ಲಿ ಯಾತ್ರಿ ನಿವಾಸ, ಪ್ರಸಾದ ವಿತರಣೆಗೆ ದಾಸೋಹ ಮಂದಿರ, ರಂಗ ಮಂದಿರ, ಕುಡಿಯುವ ನೀರು ಘಟಕ ಸ್ಥಾಪಿಸುವ ಯೋಜನೆಯನ್ನೂ ಟ್ರಸ್ಟ್‌ ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.