ADVERTISEMENT

ಚಿಣ್ಣರ ಸಡಗರಕ್ಕೆ ಸಾಕ್ಷಿಯಾದ ‘ಚಿಗುರು’

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 20:28 IST
Last Updated 15 ಡಿಸೆಂಬರ್ 2019, 20:28 IST
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಕ್ಕು ನಲಿದ ಪರಿ–ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಕ್ಕು ನಲಿದ ಪರಿ–ಪ್ರಜಾವಾಣಿ ಚಿತ್ರ   

ಬೆಂಗಳೂರು: ಅಲ್ಲಿ ಚಿಣ್ಣರು ಮಣ್ಣಿನಿಂದ ವಿವಿಧ ಮಾದರಿಗಳನ್ನು ತಯಾರಿಸಿದರು, ಬೆಂಕಿ ಬಳಸದೆಯೇ ಆಹಾರ ಸಿದ್ಧಪಡಿಸಿದರು, ಕತೆ ಹೇಳಿದರು, ನಲಿದರು, ಕುಣಿದರು... ಅಲ್ಲಿ ಸೇರಿದ್ದ ಮಕ್ಕಳ ಸಡಗರಕ್ಕೆ ಪಾರವೇ ಇರಲಿಲ್ಲ.

ಎಳೆಯರ ವಿವಿಧ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ್ದು ಯೂತ್‌ ಫಾರ್ ಸೇವಾ ಸಂಸ್ಥೆಯು ಏರ್ಪಡಿಸಿದ್ದ ‘ಚಿಗುರು’ ಅಂತರ ಶಾಲಾ ಸಾಂಸ್ಕೃತಿಕ ಉತ್ಸವ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ನಗರದ ವಿಜಯ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳು ಮಕ್ಕಳ ಪ್ರತಿಭೆಗಳನ್ನು ಒರೆಗೆ ಹಚ್ಚಿದವು.

ಕಾರ್ಯಕ್ರಮದಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಕೊಲಾಜ್‌, ಕಿರಿಯ ವಿಜ್ಞಾನಿ, ಮಣ್ಣಿನ ಮಾದರಿ, ಬೆಂಕಿರಹಿತ ಅಡುಗೆ, ಕಸದಿಂದ ರಸ, ಪ್ರತಿಭಾನ್ವೇಷಣೆ, ಕ್ರಿಯಾಶೀಲ ಬರವಣಿಗೆ, ಪ್ರಬಂಧ, ಕತೆ, ನೃತ್ಯ, ಯೋಗ, ರಸಪ್ರಶ್ನೆ, ಗುಂಪು ಹಾಡುಗಾರಿಕೆ, ವಾಚನ, ಭಾಷಣಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ADVERTISEMENT

ನಗರದ 100ಕ್ಕೂ ಹೆಚ್ಚು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 3 ಸಾವಿರ ವಿದ್ಯಾರ್ಥಿಗಳು ಸ್ಪರ್ಧೆ
ಗಳಲ್ಲಿ ಭಾಗವಹಿಸಿದರು. ವಿಭಾಗವಾರುಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸ್ಥಳದಲ್ಲೇ ಪ್ರಮಾಣಪತ್ರ ಹಾಗೂ ಪ್ರಶಸ್ತಿಗಳನ್ನು ವಿತರಿಸಲಾಯಿತು.

‘ಪ್ರತಿ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಎಲ್ಲರ ಬೆರಳಚ್ಚುಗಳಲ್ಲಿ ವ್ಯತ್ಯಾಸಗಳಿರುವಂತೆ ವಿದ್ಯಾರ್ಥಿಗಳ ಪ್ರತಿಭೆಗಳಲ್ಲೂ ವೈವಿಧ್ಯ ಇರುತ್ತದೆ’ ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು.

ಯೂತ್‌ ಫಾರ್‌ ಸೇವಾ ಸಂಸ್ಥೆಯ ಸ್ವಯಂಸೇವಕ ರೋಹಿತ್, ‘ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗುವಂತಹಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ಸೃಜನಶೀಲ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶ’ ಎಂದರು.

‘ಮೂರು ರಾಜ್ಯಗಳ 15 ಪ್ರಮುಖ ನಗರಗಳಲ್ಲಿ ಇಂದು ಚಿಗುರು ಕಾರ್ಯಕ್ರಮ ನಡೆದಿದೆ. ಸ್ವಯಂಸೇವಕರೇ ವಿವಿಧ ಶಾಲೆಗಳಿಗೆ ತೆರಳಿ ಒಂದು ತಿಂಗಳಿನಿಂದವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.