ADVERTISEMENT

ಅಂಗನವಾಡಿಗೆ ಹೊಸ ಗಾಳಿ!

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 9:25 IST
Last Updated 4 ಜುಲೈ 2012, 9:25 IST

ಚಿತ್ರದುರ್ಗ: ಸರ್ಕಾರಿ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕಟ್ಟಡಗಳಿಗೆ ಇನ್ನೂ ಮುಂದೆ ಬೆಳಕು ಮತ್ತು ಗಾಳಿ ಸಿಗಲಿದೆ. ಎಲ್ಲ ಅಂಗನವಾಡಿ ಕಟ್ಟಡಗಳಿಗೆ ಫ್ಯಾನ್ ಮತ್ತು ದೀಪದ ವ್ಯವಸ್ಥೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಜಿಲ್ಲೆಯಲ್ಲಿ 2,314 ಅಂಗನವಾಡಿಗಳು ನಡೆಯುತ್ತಿದ್ದು, 1,477 ಅಂಗನವಾಡಿಗಳು ಸರ್ಕಾರದ ಸ್ವಂತ ಕಟ್ಟಡದಲ್ಲಿ ನಡೆಯುತ್ತಿವೆ. ಈ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಬಲ್ಬ್ ಮತ್ತು  ಫ್ಯಾನ್ ಅಳವಡಿಸಲಾಗುವುದು. ಈ ಕಾರ್ಯ ಮುಂದಿನ ಎರಡು ತಿಂಗಳಲ್ಲಿ ಪೂರ್ಣವಾಗಲಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಪೌಷ್ಟಿಕಾಂಶಗಳ ಆಹಾರದ ಕೊರತೆಯಿಂದ ನರಳುತಿರುವ 3005 ಮಕ್ಕಳನ್ನು ಗುರುತಿಸಲಾಗಿದೆ. ಅವರಿಗೆ ಉತ್ತಮ ಪೌಷ್ಟಿಕಾಂಶಗಳ ಆಹಾರವನ್ನು ನೀಡುವ ಕಾರ್ಯ ಪ್ರಾರಂಭವಾಗಿದೆ. ಜಿಲ್ಲೆಗೆ ಸಂಬಂಧಪಟ್ಟಂತೆ ಮಕ್ಕಳಿಗೆ ನೀಡುವ ಆಹಾರದ ಪಟ್ಟಿಯನ್ನು ಮಾಡಲಾಗಿದೆ. ಈ ಪಟ್ಟಿ ಪ್ರಕಾರ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಪೌಷ್ಟಿಕವಾದ ಆಹಾರ ನೀಡಲಾಗುವುದು. ಇದು ಜುಲೈ 15ರಿಂದ ಪ್ರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಆಹಾರ ಪದ್ಧತಿಯಲ್ಲಿ ತಾಲ್ಲೂಕುವಾರು ಬದಲಾವಣೆ ಆಗಲಿದೆ. ಮೊಳಕಾಲ್ಮೂರು ತಾಲ್ಲೂಕಿನ ಆಹಾರ ಹೊಸದುರ್ಗದಲ್ಲಿ ಸರಿಯಾಗುವುದಿಲ್ಲ. ತಾಲ್ಲೂಕುವಾರು ಮಾಹಿತಿಯನ್ನು ಪಡೆದು ಆಹಾರದ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪ್ರಾರಂಭಿಕ ಹಂತ ನೋಡಿಕೊಂಡು ಇನ್ನೂ ಬೇಕಾದರೂ ಬದಲಾವಣೆ ಮಾಡಲಾಗುವುದು ಎಂದರು.

ರವೆ ಉಂಡೆ.. ಪಾಯಸ...
ವಾರದ ಆರು ದಿನಗಳಲ್ಲಿ ವಿವಿಧ ರೀತಿಯ ಆಹಾರ ನೀಡಲಾಗುವುದು. ರವೆ ಉಂಡೆ, ಗೋದಿ ಪಾಯಸ, ಮೊಳಕೆ ಹಾಕಿದ ಕಾಳು ಮುಂತಾದವುಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಈಗಾಗಲೇ ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯ ಪ್ರಾರಂಭಿಸಲಾಗಿದೆ. ಜುಲೈ 15ರವರೆಗೆ ಮನೆ-ಮನೆ ಭೇಟಿ ನೀಡುವ ಮೂಲಕ ಅಂಗನವಾಡಿ ಕಾರ್ಯಕರ್ತರು ತಪಾಸಣೆ ನಡೆಸಲಿದ್ದಾರೆ. ಜುಲೈ 15ರ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು. 

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರವಿಕುಮಾರ್, ಸಿಇಒ  ಗೋಪಾಲ್, ಡಿಡಿಪಿಐ ಮಂಜುನಾಥ್, ಲೋಹಿತೇಶ್ವರ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಂಜೇಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.